Mangaluru ಬಿಜೆಪಿಯೊಳಗೆ ಯಾರಲ್ಲೂ ಅಸಮಾಧಾನವಿಲ್ಲ: ನಳಿನ್
Team Udayavani, Nov 18, 2023, 11:29 PM IST
ಮಂಗಳೂರು: ಬಿಜೆಪಿಯಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಭಾವನೆಯನ್ನು ವ್ಯಕ್ತಪಡಿಸಿರುವುದು ಅದು ಅಸಮಾಧಾನ ಅಲ್ಲ ಎಂದು ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ವಿಜಯೇಂದ್ರ ಅವರು ಪಕ್ಷದ ಕಾರ್ಯಕರ್ತರಾಗಿ 10 ವರ್ಷಗಳ ಕಾಲ ರಾಜ್ಯ ಸುತ್ತಿದ್ದಾರೆ. ಅವರ ಶಕ್ತಿಯನ್ನು ಗಮನಿಸಿ ಪಕ್ಷದ ವರಿಷ್ಠರು ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಸಮರ್ಥವಾಗಿ ಪಕ್ಷವನ್ನು ಮುನ್ನಡೆಸುವ ಶಕ್ತಿ ಅವರಿಗಿದೆ. ಆರ್. ಅಶೋಕ್ ಅವರು ಪಕ್ಷದ ಹಿರಿಯ ನಾಯಕರಾಗಿ ಬಹಳ ಅನುಭವಿ. ಉಪಮುಖ್ಯಮಂತ್ರಿ, ಗೃಹ ಸಚಿವರಾಗಿ ಸರಕಾರವನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಮರ್ಥವಾಗಿ ವಿಧಾನ ಸಭೆಯಲ್ಲಿ ವಿಪಕ್ಷದ ನಾಯಕರಾಗಿ ಜವಾಬ್ದಾರಿ ನಿಭಾಯಿಸುತ್ತಾರೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೆಲವು ವಿಷಯದ ಬಗ್ಗೆ ಮಾತನಾಡಿದ್ದಾರೆ. ಅದು ಅವರ ಭಾವನೆ; ವಿರೋಧವಲ್ಲ. ಆ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.