ಶ್ರೀರಾಮ ಶಾಲಾ ವಿದ್ಯಾರ್ಥಿಗಳಿಗೆ ಭತ್ತ ಕೃಷಿ ಪ್ರಾತ್ಯಕ್ಷಿಕೆ
Team Udayavani, Jul 27, 2018, 1:40 AM IST
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕೃಷಿ ಪದ್ಧತಿ ಏಣೆಲು ಭತ್ತದ ಕೃಷಿಯ ಪ್ರಾಕೃತಿಕ ವ್ಯವಸ್ಥೆಯಲ್ಲಿ ಹೇಗೆ ತೊಡಗಿಸಿಕೊಳ್ಳುವುದು ಎಂಬ ಬಗ್ಗೆ ಸ್ವಯಂ ತೊಡಗಿಸಿಕೊಳ್ಳುವ ಪ್ರಾತ್ಯಕ್ಷಿಕೆ ಅನುಭವ ನೀಡುವ ಕಾರ್ಯಕ್ರಮ ಶಾಲಾ ವಠಾರದಲ್ಲಿ ನಡೆಯಿತು. ಸಂಸ್ಥೆಯ ಸ್ಥಾಪಕರು, ಮಾರ್ಗದರ್ಶಕ ಡಾ| ಪ್ರಭಾಕರ ಭಟ್ ಕಲ್ಲಡ್ಕ ವಿದ್ಯಾರ್ಥಿಗಳ ಜತೆಗೆ ಗದ್ದೆಗೆ ಇಳಿದು ನೇಜಿ ತೆಗೆಯುವ, ನಾಟಿ ಮಾಡುವ ಕ್ರಮವನ್ನು ಪ್ರತ್ಯಕ್ಷ ತೋರಿಸಿದರು.
ಬಳಿಕ ಮಾತನಾಡಿ, ಪರಂಪರಾಗತ ಜೀವನಶೈಲಿ ನಮ್ಮ ಬದುಕಿಗೆ ಪೂರಕ. ವಿವೇಕಾನಂದ ವಿದ್ಯಾವರ್ಧಕ ಸಂಘದ ಗ್ರಾಮ ವಿಕಾಸದ ಕಲ್ಪನೆಯಂತೆ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳ ರೈತ ವಿದ್ಯಾರ್ಥಿ ಸಂಘ, ವೃತ್ತಿ ಶಿಕ್ಷಣ ಸಂಘದ ಸದಸ್ಯರು ಏಣೆಲು ಭತ್ತದ ಕೃಷಿ ಶಿಕ್ಷಣವನ್ನು ವಿಧಾನವನ್ನು ತಿಳಿದುಕೊಳ್ಳುವುದೇ ಇದರ ಉದ್ದೇಶ ಎಂದರು. ನೇಜಿ ತೆಗೆಯುವ, ನಾಟಿ ಮಾಡುವ ಮತ್ತು ಟಿಲ್ಲರ್ ಉಳುಮೆ ಮಾಡುವ ವಿಧಾನವನ್ನು ಕಲಿತುಕೊಂಡರು. ನಾಟಿ ಕೆಲಸ ಮುಗಿದ ಮೇಲೆ ಕೆಸರಲ್ಲಿ ವಿವಿಧ ಆಟಗಳನ್ನು ಆಡಿ ಮನೋರಂಜನೆ ಪಡೆದುಕೊಂಡರು.
ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಎನ್., ಕಮಲಾ ಪ್ರಭಾಕರ ಭಟ್, ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಪ್ರಭು, ಸದಸ್ಯರಾದ ತನಿಯಪ್ಪ ಗೌಡ ನೇರಳಕಟ್ಟೆ, ಮಾತೃಭಾರತಿಯ ಸದಸ್ಯರಾದ ಪುಷ್ಪಾವತಿ ಮತ್ತು ವಸಂತಿ, ಶಿಶುಮಂದಿರದ ಮುಖ್ಯ ಮಾತಾಜಿ ಭ| ಗಂಗಾ, ಪ್ರಾ. ಶಾಲಾ ಮುಖ್ಯ ಶಿಕ್ಷಕ ರವಿರಾಜ್ ಕಣಂತೂರು, ಪ್ರೌ.ಶಾಲಾ ಮುಖ್ಯ ಶಿಕ್ಷಕಿ ವಸಂತಿ ಕುಮಾರಿ ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಜಯರಾಮ ಸುಧೆಕಾರ್ ಪವರ್ ಟಿಲ್ಲರ್ ಉಳುಮೆ ಪ್ರಾತ್ಯಕ್ಷಿಕೆ ತೋರಿಸಿದರು.