ನಾಳೆ ಕರಾವಳಿಯಲ್ಲಿ “ಪತ್ತೀಸ್ ಗ್ಯಾಂಗ್’ ತೆರೆಗೆ
Team Udayavani, Aug 9, 2018, 4:15 PM IST
ಮಂಗಳೂರು: ತುಳು ರಂಗಭೂಮಿಯ ಹಿರಿಯ ರಂಗಕರ್ಮಿ ದಿ| ಆನಂದ್ ಬೋಳಾರ್ ಸವಿನೆನಪಿನಲ್ಲಿ ಉದ್ಯಮಿ ಗರೋಡಿ ಸ್ಟೀಲ್ಸ್ನ ಮನೋಜ್ ಕುಮಾರ್ ಅರ್ಪಣೆಯ ಸೂರಜ್ ಬೋಳಾರ್ ಹಾಗೂ ಪ್ರೀತಂ ಎಂ.ಎನ್. ನಿರ್ಮಾಣ-ನಿರ್ದೇಶನದ “ಪತ್ತೀಸ್ ಗ್ಯಾಂಗ್’ ತುಳು ಸಿನೆಮಾ ಆ. 10ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸೂರಜ್ ಬೋಳಾರ್ ಅವರು, ಪತ್ತೀಸ್ ಗ್ಯಾಂಗ್ ಸಿನೆಮಾವು ಕರಾವಳಿಯ 13 ಟಾಕೀಸ್ಗಳಲ್ಲಿ ತೆರೆ ಕಾಣಲಿದೆ. ಮಂಗಳೂರಿನಲ್ಲಿ ಬಿಗ್ ಸಿನೆಮಾಸ್, ಪಿವಿಆರ್, ಸಿನೆಪೊಲೀಸ್ ಮಣಿಪಾಲದಲ್ಲಿ ಐನಾಕ್ಸ್, ಬಿಗ್ ಸಿನೆಮಾಸ್, ಉಡುಪಿಯಲ್ಲಿ ಅಲಂಕಾರ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮೂಡಬಿದಿರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್, ಪುತ್ತೂರಿನಲ್ಲಿ ಅರುಣಾ, ಸುರತ್ಕಲ್ನಲ್ಲಿ ನಟರಾಜ್ ಟಾಕೀಸ್ನಲ್ಲಿ ತೆರೆಕಾಣಲಿದೆ ಎಂದರು.
ಮೋಸ ಮಾಡುವವರ ಬಗ್ಗೆ ಜಾಗೃತಿ ಮೂಡಿಸುವ ಈ ಸಿನೆಮಾವು ತನ್ನ ವಿಭಿನ್ನ ನಿರೂಪಣೆಯಿಂದ ತುಳು ಚಿತ್ರರಂಗದಲ್ಲಿ ಹೊಸತನ ಮೂಡಿಸಲಿದ್ದು, ಇದಕ್ಕೆ ಯುಎ ಸರ್ಟಿಫಿಕೆಟ್ ಲಭಿಸಿದೆ. ನವಿರಾದ ಹಾಸ್ಯದೊಂದಿಗೆ ಉತ್ತಮ ಸಂದೇಶವನ್ನು ಕಟ್ಟಿ ಕೊಡುವ ಗ್ಯಾಂಗ್ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂದರು.
ಕೇವಲ 6 ತಿಂಗಳಲ್ಲಿ ಸಿದ್ಧವಾದ ಈ ಚಿತ್ರದಲ್ಲಿ ಅರವಿಂದ ಬೋಳಾರ್, ನೀನಾಸಂ ಖ್ಯಾತಿಯ ಮೋಹನ್ ಶೇಣಿ, ವಿಸ್ಮಯ ವಿನಾಯಕ್, ಅಜಯ್ ರಾಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಂದ್ರಹಾಸ್ ಉಳ್ಳಾಲ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನವ್ಯತಾ ರೈ ನಾಯಕಿ ಯಾಗಿ ಅಭಿನಯ ನೀಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರದ ಆಡಿಯೋವನ್ನು ಕನ್ನಡದ ಹಿರಿಯ ನಟ ಅನಂತನಾಗ್ ಬಿಡುಗಡೆ ಮಾಡಿದ್ದರು. ಸತ್ಯ ಘಟನೆಯ ಆಧಾರಿತವಾಗಿ ಈ ಸಿನೆಮಾ ಮೂಡಿಬಂದಿದ್ದು, ಕಡಿಮೆ ಬಜೆಟ್ನಲ್ಲಿ ಅತ್ಯಂತ ಉತ್ಕೃಷ್ಟ ಸಿನೆಮಾವನ್ನು ಸಿದ್ಧಗೊಳಿಸಲಾಗಿದೆ. ಕೋಸ್ಟಲ್ವುಡ್ನಲ್ಲಿ ಈ ಸಿನೆಮಾ ಅತ್ಯಂತ ವಿನೂತನ ಶೈಲಿಯಲ್ಲಿ ಮೂಡಿಬರಲಿದೆ ಎಂದವರು ಹೇಳಿದರು.