ಪ್ರಧಾನಿ ಮೋದಿಯವರ ಮಂಗಳೂರು ಭೇಟಿ : ಭರದ ಸಿದ್ಧತೆ, 2ಲಕ್ಷ ಮಂದಿ ಸಾಮರ್ಥ್ಯದ ಚಪ್ಪರ ನಿರ್ಮಾಣ
ಜಿಲ್ಲಾಡಳಿತದಿಂದ ನಿರಂತರ ಸಭೆ
Team Udayavani, Aug 27, 2022, 8:40 AM IST
ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಭೇಟಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಸಿದ್ಧತೆಗಳು ನಡೆಯುತ್ತಿವೆ.
ಪ್ರಧಾನಿಯವರ ಸಮಾವೇಶದ ತಾಣವಾಗಿರುವ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ. ಸುಮಾರು 2 ಲಕ್ಷ ಮಂದಿ ಕುಳಿತುಕೊಳ್ಳಲು ಸಾಧ್ಯವಾಗು ವಂತಹ ಶೀಟ್ಗಳನ್ನು ಅಳವಡಿಸಿ ಬೃಹತ್ ಚಪ್ಪರ ಹಾಕುವ ಕಾಮಗಾರಿ ಭರದಿಂದ ಸಾಗುತ್ತಿದೆ. 20 ಅಡಿ ಎತ್ತರ, 60 ಅಡಿ ಉದ್ದ ಹಾಗೂ 80 ಅಡಿ ಅಗಲದ ಸಭಾವೇದಿಕೆ ಸಿದ್ಧಗೊಳಿಸಲಾಗುತ್ತಿದೆ. ಮಳೆ ಬಂದರೆ ನೀರು ಸಭಾಂಗಣದೊಳಗೆ ಬಾರದಂತೆ ಸುತ್ತಲೂ ತಾತ್ಕಾಲಿಕ ಚರಂಡಿ ನಿರ್ಮಿಸಲಾಗುತ್ತಿದೆ. ಪಾರ್ಕಿಂಗ್ ವ್ಯವಸ್ಥೆಗೆ ತಾಣಗಳನ್ನು ಗುರುತಿಸಲಾಗುತ್ತಿದೆ. ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
ನವಮಂಗಳೂರು ಬಂದರಿನಲ್ಲಿ ನಿಗದಿ ಯಾಗಿರುವ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಲೋಕಾರ್ಪಣೆ ಮಾಡುವ ಬಗ್ಗೆಯೂ ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ. ಒಂದು ಮೂಲಗಳ ಪ್ರಕಾರ ಪ್ರಧಾನಿಯವರು ನವಮಂಗ ಳೂರು ಬಂದರಿಗೆ ತೆರಳಿ ಅಲ್ಲಿ ನಿಗದಿ ಕಾರ್ಯಕ್ರಮಗಳನ್ನು ಪೂರೈಸಿ ಬಳಿಕ ಗೋಲ್ಡ್ಫಿಂಚ್ ಸಿಟಿಗೆ ಆಗಮಿಸುತ್ತಾರೆ. ಇನ್ನೊಂದು ಮೂಲಗಳ ಪ್ರಕಾರ ಗೋಲ್ಡ್ಫಿಂಚ್ ಸಿಟಿಯಲ್ಲೇ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸುತ್ತಾರೆ. ಪ್ರಧಾನಿಯವರ ಅಧಿಕೃತ ಪ್ರವಾಸ ವೇಳಾಪಟ್ಟಿ ಬಳಿಕ ಇದು ಸ್ಪಷ್ಟವಾಗಲಿದೆ.
ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ| ಭರತ್ ಶೆಟ್ಟಿ ವೈ., ವೇದವ್ಯಾಸ ಕಾಮತ್ ಅವರು ಸಿದ್ಧತೆಗಳನ್ನು ಪರಿಶೀಲಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ ದಿನೇಶ್ ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಟ್ರಾಫಿಕ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಶನಿವಾರ ಮಂಗಳೂರಿಗೆ ಆಗಮಿಸಲಿದ್ದು ಪ್ರಧಾನಿ ಭೇಟಿ ವೇಳೆ ಇಲಾಖೆಯಿಂದ ಆಗಬೇಕಾದ ವ್ಯವಸ್ಥೆಗಳ ಪರಿಶೀಲನೆ ನಡೆಸಲಿದ್ದಾರೆ. ಒಂದೊಮ್ಮೆ ಪ್ರಧಾನಿಯವರು ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಆಗಮಿಸಿದರೆ ಯಾವುದೇ ಅಡಚಣೆಯಾಗದಂತೆ ಸುಗಮ ಸಂಚಾರಕ್ಕೆ ರಸ್ತೆಯನ್ನು ಸಿದ್ದಗೊಳಿಸಲಾಗುತ್ತಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಕುಳೂರುವರೆಗಿನ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದೆ.
ಉಪಾಹಾರ, ಊಟದ ವ್ಯವಸ್ಥೆ
ಪ್ರಧಾನಿಯವರು ಸಂಜೆ ಮಂಗಳೂರಿಗೆ ಆಗಮಿಸುವ ವೇಳೆ ಸಂಜೆಯ ಉಪಾಹಾರ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ವತಿಯಿಂದ ಮಾಡಲಾಗುತ್ತಿದೆ. ಕಳೆದ ಬಾರಿ ಬೆಳಗಿನ ಉಪಾ ಹಾರದ ವ್ಯವಸ್ಥೆಯನ್ನು ನಗರದ ಖಾಸಗಿ ಹೊಟೇಲ್ನಿಂದ ಮಾಡಲಾಗಿತ್ತು. ಈ ಬಾರಿಯೂ ಇದೇ ಹೊಟೇಲ್ನಿಂದ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ.
ಚುನಾವಣ ಆಯಾಮ
ಪ್ರಧಾನಿಯವರ ಮಂಗಳೂರು ಭೇಟಿ ಕರಾವಳಿ ಭಾಗದಲ್ಲಿ ಬಿಜೆಪಿ ಕಾರ್ಯ ಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ.
ಪ್ರಧಾನಿಯವರ 2017ರ ಭೇಟಿ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿ ಸುತ್ತಿರುವ ಸಂದರ್ಭದಲ್ಲೇ ನಡೆದಿತ್ತು. 2018ರ ವಿಧಾನಸಭಾ ಚುನಾವಣೆ ಮೇ 12ರಂದು ನಡೆದಿತ್ತು. ಪ್ರಧಾನಿಯವರು ಕೇರಳದ ಕೊಚ್ಚಿ ವಿಮಾನ ನಿಲ್ದಾಣದ ಮೂಲಕ ಲಕ್ಷದ್ವೀಪಕ್ಕೆ ತೆರಳಲು ಅವಕಾಶ ವಿದ್ದರೂ ಅವರು ಮಂಗಳೂರು ಮಾರ್ಗ ವನ್ನೇ ಆರಿಸಿಕೊಂಡಿದ್ದರು ಹಾಗೂ ಮಂಗಳೂರಿನಲ್ಲಿ ವಾಸ್ತವ್ಯ ಮಾಡಿದ್ದಕ್ಕೆ ಚುನಾವಣೆಗೆ ತಳುಕು ಹಾಕಲಾಗಿತ್ತು. ಈ ಬಾರಿಯೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.
ಮೋದಿಯವರ ವಾಸ್ತವ್ಯ ಸಾಧ್ಯತೆ
ಪ್ರಧಾನಿಯವರು ಮಂಗಳೂರಿನಲ್ಲಿ ಆ. 2ರಂದು ವಾಸ್ತವ್ಯ ಹೂಡುವ ಸಂಭಾವ್ಯ ಸಾಧ್ಯತೆಗಳನ್ನು ಪರಿಗಣಿಸಿ ಅದಕ್ಕೆ ಪೂರಕವಾಗಿ ಕೂಡ ಸಿದ್ಧತೆಗಳು ಮಾಡಲಾಗುತ್ತಿದೆ. ಸಾಮಾನ್ಯವಾಗಿ ಪ್ರಧಾನಿ, ರಾಷ್ಟ್ರಪತಿ ಮುಂತಾದ ಅತೀ ಗಣ್ಯರು ಬರುವ ಸಂದರ್ಭ ಶಿಷ್ಟಾಚಾರದಂತೆ ಅವರ ವಾಸ್ತವ್ಯಕ್ಕೆ ಎರಡು ತಾಣಗಳನ್ನು ಸಿದ್ಧಗೊಳಿಸಿ ಇಡಲಾಗುತ್ತಿದೆ. ಇದರಂತೆ ನಗರದ ಸರ್ಕ್ನೂಟ್ ಹೌಸ್, ಎನ್ಎಂಪಿಟಿ ಗೆಸ್ಟ್ ಹೌಸ್ಗಳ ಪರಿಶೀಲನೆ ನಡೆದಿದೆ. ಪ್ರಧಾನಿಯವರು ಮಂಗಳೂರಿನಲ್ಲಿ ವಾಸ್ತವ¤ದ ಸಾಧ್ಯತೆಗಳೂ ಇವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮೋದಿಯವರು ಒಖೀ ಚಂಡಮಾರುತದಿಂದ ಸಂಭವಿಸಿದ ಹಾನಿಯನ್ನು ವೀಕ್ಷಿಸಲು ಲಕ್ಷದ್ವೀಪಕ್ಕೆ ತೆರಳುವ ಹಾದಿಯಲ್ಲಿ 2017ರ ಡಿ.18ರಂದು ಮಂಗಳೂರು ಸರ್ಕ್ನೂಟ್ ಹೌಸ್ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ಹೊಸದಿಲ್ಲಿಯಿಂದ ವಿಶೇಷ ವಿಮಾನದ ಮೂಲಕ ರಾತ್ರಿ 11.45ರ ವೇಳೆಗೆ ಮಂಗಳೂರು ತಲುಪಿದ್ದರು. ಮರುದಿನ ಬೆಳಗ್ಗಿನ ಉಪಾಹಾರ ಸೇವಿಸಿ ಲಕ್ಷದ್ವೀಪಕ್ಕೆ ಪ್ರವಾಸ ಮುಂದುವರಿಸಿದ್ದರು.
ಜಿಲ್ಲಾಡಳಿತದಿಂದ ನಿರಂತರ ಸಭೆ
ಪ್ರಧಾನಿಯವರ ಭೇಟಿ ಸಂದರ್ಭ ಸೂಕ್ತ ವ್ಯವಸ್ಥೆಗಳನ್ನು ಯಾವುದೇ ಲೋಪಕ್ಕೆ ಆಸ್ಪದವಾಗದಂತೆ ನಿರ್ವಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ವಿವಿಧ ಇಲಾಖೆಗಳ ಪ್ರಮುಖರ ಸಭೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಧಾನಿ ಭೇಟಿ ವೇಳೆ ಪಾಲಿಸಬೇಕಾದ ಶಿಷ್ಟಾಚಾರಗಳು, ಭದ್ರತಾ ವ್ಯವಸ್ಥೆ, ಮಂಗಳೂರಿನಲ್ಲಿ ಅವರ ಕಾರ್ಯಕ್ರಮಗಳ ವೇಳೆ ಅವಶ್ಯ ಎಲ್ಲ ಸಿದ್ಧತೆಗಳು ವ್ಯವಸ್ಥಿತವಾಗಿ ನಡೆಯುವಂತೆ ನಿಗಾ ಮುಂತಾದ ವಿಚಾರಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಸಭೆಯಲ್ಲಿ ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಮುಖ್ಯಸ್ಥರು. ವಿಮಾನ ನಿಲ್ದಾಣದ ಅಧಿಕಾರಿಗಳು, ನವಮಂಗಳೂರು ಬಂದರು ಅಧಿಕಾರಿಗಳು, ಎಂಆರ್ಪಿಎಲ್ ಪ್ರಮುಖರು ಭಾಗವಹಿಸಿದ್ದರು.