ಮಂಗಳೂರು ಬೋಟ್ ದುರಂತ: ನಾಲ್ವರು ಪತ್ತೆಯಾಗುವವರೆಗೂ ಮೀನುಗಾರಿಕಾ ಬಂದರು ಬಂದ್ ಮಾಡಿ ಮುಷ್ಕರ
Team Udayavani, Dec 2, 2020, 9:28 AM IST
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆಯಾಗಿ ನಾಪತ್ತೆಯಾದವರಲ್ಲಿ ಇನ್ನೂ ನಾಲ್ವರು ಪತ್ತೆಯಾಗದ ಹಿನ್ನಲೆಯಲ್ಲಿ ಮಂಗಳೂರು ಮೀನುಗಾರಿಕಾ ಬಂದರು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ.
ಮೀನುಗಾರಿಕೆಗಾಗಿ ನಗರದ ಬಂದರಿನಿಂದ ತೆರಳಿದ್ದ ಪರ್ಸೀನ್ ಬೋಟ್ ಸೋಮವಾರ ರಾತ್ರಿ ಅರಬಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ನಾಪತ್ತೆಯಾದ ಆರು ಮಂದಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ಮುಂದುವರಿದಿದೆ. ಬೋಟ್ ನಲ್ಲಿ ಒಟ್ಟು 25 ಮಂದಿ ತೆರಳಿದ್ದು, 19 ಮಂದಿ ಪಾರಾಗಿದ್ದಾರೆ.
ನಾಪತ್ತೆಯಾದವರನ್ನು ಶೀಘ್ರವಾಗಿ ಪತ್ತೆ ಮಾಡಬೇಕು. ಉಳಿದ ನಾಲ್ವರು ಪತ್ತೆಯಾಗುವವರೆಗೆ ಮೀನು ವ್ಯವಹಾರ ಮಾಡುವುದಿಲ್ಲ ಎಂದು ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:28 ವರ್ಷಗಳಿಂದ ಮಗನನ್ನು ಕೋಣೆಯಲ್ಲಿ ಕೂಡಿಹಾಕಿದ ಮಹಿಳೆ: ಕಾರಣ ಭಯಾನಕ !
ಸಮುದ್ರಪಾಲಾಗಿದ್ದ ಆರು ಮಂದಿಯಲ್ಲಿ ಬೊಕ್ಕಪಟ್ಣ ಬೆಂಗ್ರೆಯ ಪಾಂಡುರಂಗ ಸುವರ್ಣ (58) ಮತ್ತು ಪ್ರೀತಂ (25) ಅವರ ಮೃತ ದೇಹ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ. ಬೊಕ್ಕಪಟ್ಣ ಬೆಂಗ್ರೆಯ ಚಿಂತನ್ (21), ಕಸ್ಬಾ ಬೆಂಗ್ರೆಯ ಹಸೈನಾರ್ (25), ಅನ್ಸಾರ್ (31) ಮತ್ತು ಜಿಯಾವುಲ್ಲಾ (32) ಅವರು ನಾಪತ್ತೆಯಾಗಿದ್ದಾರೆ.
ಬಂದರಿನಲ್ಲಿ ಮೀನುಗಾರರು ಸೇರಿದ್ದು, ಕಪ್ಪು ಬಟ್ಟೆ, ಕಪ್ಪು ಧ್ವಜ ಹಾರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರು ಹಾಜರಿದ್ದು, ಶಾಂತಿ ಸುವ್ಯವಸ್ಥೆಗೆ ಕ್ರಮ ಕೈಗೊಂಡಿದ್ದಾರೆ.