ವಿವಿಧೆಡೆ ಮುಂದುವರಿದ ಮಳೆ
ಕಲ್ಲುಮುಟ್ಲುವಿನಲ್ಲಿ ಜಾಕ್ವೆಲ್ ಕಾಮಗಾರಿ ಸ್ಥಗಿತ
Team Udayavani, May 20, 2022, 9:11 AM IST
ಸುಳ್ಯ: ಸುಳ್ಯ ನಗರದ ಕಲ್ಲುಮುಟ್ಲುವಿನಲ್ಲಿ ನಗರ ಪಂಚಾಯತ್ನ ನೀರು ಸರಬರಾಜು ಪಂಪ್ ಬಳಿಯಲ್ಲಿ ಮಳೆಗೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ನಗರ ನೀರು ಸರಬರಾಜಿಗೆ ನಿರ್ಮಾಣವಾಗುತ್ತಿದ್ದ ಜಾಕ್ವೆಲ್ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ಪಯಸ್ವಿನಿ ನದಿಯಲ್ಲಿ ಕೆಸರು ಮಿಶ್ರಿತ ನೀರು ಹರಿದು ಬರುತ್ತಿದೆ. ಈ ನೀರನ್ನು ಶುದ್ಧೀಕರಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಸುಳ್ಯ ನಗರಕ್ಕೆ ನೀರು ಸರಬರಾಜು ಮಾಡುವುದು ತ್ರಾಸದಾಯಕವಾಗಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಗರಕ್ಕೆ ನೀರು ಸರಬರಾಜಿಗೆ 2.5 ಕೋಟಿ ರೂ. ವೆಚ್ಚದಲ್ಲಿ ಜಾಕ್ವೆಲ್ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಪಂಪ್ ಹೌಸ್ ಕಟ್ಟಡದ ಮುಂಭಾಗದ ಗ್ರೌಂಡ್ನ ಭಾಗ ಕುಸಿದ ಕಾರಣ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸದಸ್ಯ ಬುದ್ಧ ನಾಯ್ಕ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ ತಾಲೂಕಿನಲ್ಲಿ ದಿನವಿಡೀ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಈ ಸಂದರ್ಭ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.