ದಕ್ಷಿಣ ಕನ್ನಡದ ಮೂರು ಕಡೆ ಅತಿ ಕಡಿಮೆ ಮಳೆ ದಾಖಲು
ಮಾನ್ಸೂನ್ ಕಾಲಿರಿಸಿ ವಾರ ಮೂರಾದರೂ ಉತ್ತಮ ಮಳೆಯಾಗಿಲ್ಲ
Team Udayavani, Jul 8, 2019, 5:06 AM IST
ಮಹಾನಗರ: ರಾಜ್ಯ ಕರಾವಳಿಗೆ ಮುಂಗಾರು ಕಾಲಿಟ್ಟು ಇಪ್ಪತ್ತು ದಿನಗಳು ಕಳೆದರೂ ಇನ್ನೂ ಪೂರ್ಣ ಪ್ರಮಾಣದ ಮಳೆಗಾಲ ಆರಂಭಗೊಂಡಿಲ್ಲ. ಕಳೆದ ವರ್ಷ ಜೂನ್ ತಿಂಗಳಿನಿಂದ ಜು. 4ರ ವರೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಈ ವೇಳೆ ವಾಡಿಕೆ ಮಳೆಗಿಂತ ಶೇ.15ರಷ್ಟು ಮಳೆ ಪ್ರಮಾಣ ಹೆಚ್ಚಾಗಿತ್ತು. ಆದರೆ ಈ ಬಾರಿ ಶೇ.34ರಷ್ಟು ಮಳೆ ಕೊರತೆ ಇದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ಸುಳ್ಯದಲ್ಲಿ ಅತೀ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಮಳೆಯಾಗದಿರಲು ಮುಖ್ಯ ಕಾರಣ ಗಾಳಿಯಲ್ಲಿ ತೇವಾಂಶ ಇಲ್ಲದಿರುವುದು. ಅಲ್ಲದೆ ಮಳೆ ತರುವ ಮೋಡಗಳಿಲ್ಲ.
ಮುಂಗಾರು ವೇಳೆ ಸಾಧಾರಣವಾಗಿ ಬಂಗಾಲಕೊಲ್ಲಿಯಲ್ಲಿ ನಿಮ್ನ ಒತ್ತಡ ಉಂಟಾಗಿ ಮಳೆ ಸುರಿಯುತ್ತದೆ. ಸದ್ಯ ಕೊಂಕಣ ಗೋವಾದಲ್ಲಿ ಟ್ರಫ್ ಉಂಟಾಗಿದ್ದು, ಇದರ ಪರಿಣಾಮ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಗೋವಾದಲ್ಲಿ ಉಂಟಾಗಿರುವ ನಿಮ್ನ ಒತ್ತಡವು ಕೇರಳ ಕರಾವಳಿಗೂ ವಿಸ್ತರಿಸಿದರೆ ನಮ್ಮಲ್ಲೂ ಮಳೆ ಸುರಿಯಬಹುದು.
ಕಳೆದ ವರ್ಷ ಕರಾವಳಿಯಲ್ಲಿ ಉತ್ತಮ ಮಳೆ ಸುರಿಯಲು ಕಾರಣಮೇ ತಿಂಗಳಿನಲ್ಲಿ ಉಂಟಾಗಿದ್ದ ಚಂಡಮಾರುತ. ಇದಾದ ಕೆಲವೇ ದಿನಗಳಲ್ಲಿ ಮತ್ತೂಂದು ಪ್ರಬಲ ಚಂಡಮಾರುತ ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿ ಉತ್ತಮ ಮಳೆಯಾಗಿತ್ತು. ಆದರೆ ಈ ಬಾರಿ ‘ವಾಯು’ ಚಂಡ ಮಾರುತ ಮುಂಗಾರು ಮಳೆಯಾಗಲು ಅನುಕೂಲಕರ ವಾತಾವರಣ ನಿರ್ಮಿಸುವ ಬದಲು ಮಾನ್ಸೂನ್ ಮಾರುತಗಳನ್ನು ಕೊಂಚ ದಿಕ್ಕು ತಪ್ಪಿಸಿದೆ.
ತೀವ್ರ ಮಳೆಕೊರತೆ ಪ್ರದೇಶ
ಒಂದು ವಾರ ಭಾರೀ ಮಳೆ ಅನುಮಾನ
ಜೂ.1ರಿಂದ ಜು. 4: ಕೊರತೆ ಮಳೆ: ಎಲ್ಲಿ – ಎಷ್ಟು ?