ಕತಾರ್ ನಲ್ಲಿ ಕಂಪ್ರೆಸರ್ ಸಿಡಿದು ದ.ಕ.ಮೂಲದ ಯುವಕ ಸಾವು
Team Udayavani, Jul 24, 2019, 11:09 AM IST
ಮಂಗಳೂರು : ದಕ್ಷಿಣ ಕನ್ನಡ ಮೂಲದ ಯುವಕ ಸಂದೇಶ್ ಶೆಟ್ಟಿ (30) ಕತಾರ್ ನಲ್ಲಿ ಕಂಪ್ರೆಶರ್ ಸಿಡಿದು ಮೃತಪಟ್ಟ ಘಟನೆ ನಡೆದಿದೆ.
ಮೂಲತಃ ಪುಂಜಾಲಕಟ್ಟೆ ಸಮೀಪದ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪುರಿಯ ನಿವಾಸಿ ಗಣೇಶ್ ಶೆಟ್ಟಿ – ವಾರಿಜಾ ಶೆಟ್ಟಿ ದಂಪತಿ ಕೊನೆಯ ಪುತ್ರ ಸಂದೇಶ್ ಉದ್ಯೋಗ ನಿಮಿತ್ತ ಕತಾರ್ ನಲ್ಲಿದ್ದರು. ಜುಲೈ 23ರ ಬುಧವಾರ ಮಧ್ಯಾಹ್ನ ನಡೆದ ದುರ್ಘಟನೆಯಲ್ಲಿ ಸಂದೇಶ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸಂದೇಶ್ ಅವರಿಗೆ 28 ವರ್ಷ ವಯಸ್ಸಾಗಿತ್ತು. ಇವರು ಇಲ್ಲಿನ ಕಂಪೆನಿಯೊಂದರಲ್ಲಿ ಎಸಿ ಮತ್ತು ಚಿಲ್ಲರ್ ಪ್ಲಾಂಟ್ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಲ್ಲಿನ ಅಲ್-ಸಾದ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಚಿಲ್ಲರ್ ಪ್ಲಾಂಟ್ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಹುಟ್ಟೂರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಸಂದೇಶ್ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ಹಾಗೂ ರವಿ ಶೆಟ್ಟಿ, ವೆಂಕಟ್ ರಾವ್, ರಾಮಣ್ಣ ಹೆಗ್ಡೆ ಮುಂತಾದವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿದುಬಂದಿದೆ. ಸಂದೇಶ್ ಅವರ ಪತ್ನಿಯೂ ಸಹ ವಿಸಿಟಿಂಗ್ ವಿಸಾದಲ್ಲಿ ಇತ್ತೀಚೆಗಷ್ಟೆ ಕತಾರ್ ಗೆ ತೆರಳಿದ್ದರು. ಸಂದೇಶ್ ಅವರ ಅಜ್ಜಿ ಮನೆ (ತಾಯಿಯ ಮನೆ) ಪುರಿಯಲ್ಲಿದ್ದು, ಪುಂಜಾಲಕಟ್ಟೆಯಲ್ಲಿ ಶಿಕ್ಷಣ ಪಡೆದಿದ್ದರು.