ಶಶಿಕಾಂತ್ ಸೆಂಥಿಲ್ ನಡೆ ನಿಗೂಢ
Team Udayavani, Sep 8, 2019, 5:43 AM IST
ಮಂಗಳೂರು: ಐಎಎಸ್ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿರುವ ಶಶಿಕಾಂತ್ ಸೆಂಥಿಲ್ ಈಗ ಯಾರ ಸಂಪರ್ಕ ಅಥವಾ ಭೇಟಿಗೂ ಲಭ್ಯವಾಗುತ್ತಿಲ್ಲ. ಅವರ ಮುಂದಿನ ನಡೆ ನಿಗೂಢವಾಗಿದೆ.
ರಾಜೀನಾಮೆ ಬಳಿಕ ಅವರು ಚೆನ್ನೈಗೆ ಹೋಗುತ್ತಾರೆ ಎನ್ನಲಾಗಿತ್ತು. ಆದರೆ ಅವರು ಶನಿವಾರ ಬೆಳಗ್ಗೆ ಮಂಗಳೂರಿನಲ್ಲಿದ್ದು, ಬಳಿಕ ಖಾಸಗಿ ಕಾರಿನಲ್ಲಿ ತೆರಳಿ
ದ್ದಾರೆ. ಅವರು ಜಿಲ್ಲೆಯಲ್ಲೇ ಉಳಿದುಕೊಂಡಿದ್ದು, ಎಲ್ಲಿದ್ದಾರೆ, ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಶಶಿಕಾಂತ್ ಸೆಂಥಿಲ್ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಐಎಎಸ್ ನಿಯಮದಂತೆ ರಾಜೀನಾಮೆ ಅಂಗೀಕಾರಗೊಳ್ಳಲು ಕನಿಷ್ಠ 15 ದಿನಗಳ ಕಾಲಾವಕಾಶ ಇದೆ. ಶುಕ್ರವಾರ ರಾಜ್ಯ ಸರಕಾರ ಹೊರಡಿಸಿದ ಐಎಎಸ್ ಅಧಿಕಾರಿಗಳ ವರ್ಗಾವಣೆ ಸುತ್ತೋಲೆಯಲ್ಲಿ ಸೆಂಥಿಲ್ ವರ್ಗಾವಣೆಗೊಂಡಿದ್ದಾರೆ ಎಂದು ಉಲ್ಲೇಖೀಸಲಾಗಿದೆ.
ಶನಿವಾರ ಬೆಳಗ್ಗೆ ಮಂಗಳೂರಿನಲ್ಲಿದ್ದ ಸೆಂಥಿಲ್ ಅವರು ಕೆಲವು ಮಾಧ್ಯಮಗಳ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರ ಜತೆ ಚಹಾಕೂಟ ನಡೆಸಿ ಔಪಚಾರಿಕವಾಗಿ ಮಾತನಾಡುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದೇ ಸಂದರ್ಭ ವಿವಿಧ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಶನಿವಾರ ಸೆಂಥಿಲ್ ಅವರ ಭೇಟಿ ಬಯಸಿ ಮಂಗಳೂರಿನ ಜಿಲ್ಲಾಧಿಕಾರಿಯ ನಿವಾಸಕ್ಕೆ ಹಲವರು ಆಗಮಿಸಿದ್ದರು, ಆದರೆ ಕಾವಲು ಪೊಲೀಸರು ಅವರಿಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ.