ತುರಾಯಾ ಸಂಪರ್ಕ ಸ್ವರೂಪ ಗಂಭೀರ
Team Udayavani, Sep 22, 2021, 7:20 AM IST
ಮಂಗಳೂರು: ಕರಾವಳಿ ಭಾಗದಲ್ಲಿ ಪದೇ ಪದೆ ಸದ್ದು ಮಾಡುತ್ತಿರುವ ಸ್ಯಾಟಲೈಟ್ ಫೋನ್ ಕರೆಗಳ ವಿಚಾರ ಈಗ ಹೆಚ್ಚು ಗಂಭೀರತೆ ಪಡೆದುಕೊಂಡಿದೆ. ರಾಜ್ಯದಲ್ಲಿ ಕಳೆದ 9 ತಿಂಗಳುಗಳಲ್ಲಿ 220 ಬಾರಿ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ ಎಂದು ಗೃಹಸಚಿವರೇ ವಿಧಾನಸಭೆಯಲ್ಲಿ ಹೇಳಿರುವುದು ಇದಕ್ಕೆ ಕಾರಣ.
ಕೆಲವು ವರ್ಷಗಳಿಂದೀಚೆಗೆ ಅನೇಕ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ವಿದೇಶಕ್ಕೆ ನಿಷೇಧಿತ “ತುರಾಯಾ’ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕವಾಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಅಧಿಕಾರಿ ಗಳು, ಸರಕಾರ ಅಧಿಕೃತವಾಗಿ ಏನನ್ನೂ ಹೇಳಿರಲಿಲ್ಲ.
ಒಂದು ವಾರದ ಅವಧಿಯಲ್ಲಿ ದ.ಕ. ಜಿಲ್ಲೆ ಸಹಿತ ರಾಜ್ಯದ ಕೆಲವು ಕಡೆಗಳಿಂದ “ತುರಾಯಾ’ ಮೂಲಕ ವಿದೇಶಕ್ಕೆ ಸಂಪರ್ಕ ಆಗಿರುವ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆ ಎಂದು ವರದಿಯಾಗಿತ್ತು. ಜಿಲ್ಲೆಯ ಬೆಳ್ತಂಗಡಿ ತಾಲೂಕು, ಉತ್ತರ ಕನ್ನಡ, ಚಿಕ್ಕಮಗಳೂರುಗಳಲ್ಲಿ “ತುರಾಯಾ’ ನೆಟ್ವರ್ಕ್ ಪತ್ತೆಯಾಗಿದೆ ಎನ್ನಲಾಗಿತ್ತು.
ಗೃಹ ಸಚಿವರು ವಿಧಾನಸಭೆಯಲ್ಲಿ ಹೇಳಿರುವುದು ದೇಶದ ಭದ್ರತೆ ದೃಷ್ಟಿಯಿಂದ ಗಂಭೀರ ವಿಚಾರವಾಗಿದೆ. ಹೀಗಾಗಿ ತನಿಖೆ ಚುರುಕುಗೊಳ್ಳಬೇಕಾಗಿದೆ.
ಪುಷ್ಟಿ ನೀಡುವ ಅಂಶಗಳು:
ಇನ್ನೊಂದೆಡೆ ಇತ್ತೀಚೆಗೆ ಶ್ರೀಲಂಕಾ ದಿಂದ ತಮಿಳುನಾಡು, ಕೇರಳ, ಕರ್ನಾಟಕ ಕರಾವಳಿ ಮೂಲಕ ಪಾಕ್ ಕಡೆಗೆ ಶಂಕಿತ ಉಗ್ರರು ಸಂಚರಿಸಿರುವ ಸಾಧ್ಯತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಪ್ತಚರ ಇಲಾಖೆ ಕರಾವಳಿಯಲ್ಲಿ ಹೈ ಅಲರ್ಟ್ಗೆ ಸೂಚಿಸಿತ್ತು. 2 ತಿಂಗಳುಗಳ ಹಿಂದೆ ಉಗ್ರವಾದಿ ಸಂಘಟನೆಗಳ ಜತೆಗಿನ ಸಂಪರ್ಕದ ಶಂಕೆಯಲ್ಲಿ ಎನ್ಐಎ ಅಧಿಕಾರಿಗಳು ಮಂಗಳೂರಿನ ಉಳ್ಳಾಲ ಮತ್ತು ಭಟ್ಕಳದ ವ್ಯಕ್ತಿಗಳನ್ನು ಬಂಧಿಸಿದ್ದರು. 15 ದಿನಗಳ ಹಿಂದೆಯೂ ಕರಾವಳಿಯಲ್ಲಿ ಭಯೋತ್ಪಾದನ ಕೃತ್ಯ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ವಿಶೇಷ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ಬಂದಿತ್ತು ಎಂದು ವರದಿಯಾಗಿತ್ತು. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಬಂಧಿಸಲ್ಪಟ್ಟ ಉಗ್ರರ ಪೈಕಿ ಓರ್ವ ಉಪ್ಪಿನಂಗಡಿಯಲ್ಲಿ ಈ ಹಿಂದೆ ಮನೆ ಮಾಡಿದ್ದ ಎಂಬುದು ಕೂಡ ಇದೀಗ ಬೆಳಕಿಗೆ ಬಂದಿದೆ. ಈ ಎಲ್ಲ ಬೆಳವಣಿಗೆಗಳು ಕರಾವಳಿಗೆ ಉಗ್ರರ ನಂಟು ಇರುವ ಶಂಕೆಗೆ ಪುಷ್ಟಿ ನೀಡುತ್ತವೆ.
2003ರಿಂದಲೇ ಸ್ಲಿàಪರ್ ಸೆಲ್ಗಳು ಸಕ್ರಿಯ
ಕರಾವಳಿಯಲ್ಲಿ ಉಗ್ರರ ಸ್ಲಿàಪರ್ ಸೆಲ್ಗಳು 2003ರಿಂದಲೇ ಸಕ್ರಿಯವಾಗಿರುವುದು 2008ರಲ್ಲಿ ಇಂಡಿಯನ್ ಮುಜಾಹಿದ್ದೀನ್ನ ಇಬ್ಬರ ಬಂಧನದ ವೇಳೆ ಬೆಳಕಿಗೆ ಬಂದಿತ್ತು.
ರಿಯಾಜ್ ಭಟ್ಕಳ ಮತ್ತು ಯಾಸಿನ್ ಭಟ್ಕಳ ಉಗ್ರ ಸಂಘಟನೆಗಳೊಂದಿಗೆ ಹೊಂದಿದ್ದ ನಂಟು ಮತ್ತು ಅದರ ಸಂಪರ್ಕ ಜಾಲ ಕರಾವಳಿಯಲ್ಲಿ ಹರಡಿರುವ ವಿಚಾರ ತಲ್ಲಣವುಂಟು ಮಾಡಿತ್ತು. ಮುಂಬಯಿ ಪೊಲೀಸರು 2008ರ ಅ. 3ರಂದು ಉಳ್ಳಾಲ ಸಹಿತ ಕರಾವಳಿಯ ನಾಲ್ಕು ಕಡೆ ದಾಳಿ ನಡೆಸಿದ್ದರು.
2021ರ ಆಗಸ್ಟ್ನಲ್ಲಿ ಐಸಿಸ್ನೊಂದಿಗೆ ನಂಟು ಹೊಂದಿದ್ದ ಇಬ್ಬರನ್ನು ಬಂಧಿಸಲಾಗಿತ್ತು. ಈಗಲೂ ಎನ್ಐಎ ಕರಾವಳಿಯ ಹಲವೆಡೆ ಹೆಚ್ಚಿನ ನಿಗಾ ಇರಿಸಿದೆ ಎಂದು ಮೂಲಗಳು ತಿಳಿಸಿವೆ.