ಕಡಲ್ಕೊರೆತ : ಕಾಂಕ್ರೀಟ್ ರಸ್ತೆ ಛಿದ್ರ, ಕುಸಿಯುವ ಭೀತಿಯಲ್ಲಿ ಹಲವು ಮನೆಗಳು
Team Udayavani, Jul 13, 2022, 1:35 AM IST
ಬೈಕಂಪಾಡಿ : ಇಲ್ಲಿನ ಮೀನಕಳಿಯ ಪ್ರದೇಶದಲ್ಲಿ ಕುಸಿತದ ಭೀತಿಯಲ್ಲಿದ್ದ ಕಾಂಕ್ರೀಟ್ ರಸ್ತೆ ಮಂಗಳವಾರ ಬೆಳಗ್ಗೆ ಕಡಲ್ಕೊರೆತಕ್ಕೆ ಸಿಲುಕಿ ತುಂಡು ತುಂಡಾಗಿ ಬಿದ್ದು ಸಮುದ್ರದ ಒಡಲು ಸೇರಿದೆ.
ಇಲ್ಲಿನ ಹಲವಾರು ಮನೆಗಳು ಕುಸಿಯುವ ಭೀತಿ ಎದುರಿಸುತ್ತಿವೆ. ಕೂಳೂರು ಫಲ್ಗುಣಿ ನದಿ ಬಳಿ ಇರುವ ಕೆಪಿಟಿಸಿಎಲ್ನ ಬೃಹತ್ ವಿದ್ಯುತ್ ಟವರ್ ಮಂಗಳವಾರ ಕುಸಿದು ಬಿದ್ದಿದ್ದು, ಕೋಡಿಕಲ್ ಪ್ರದೇಶದ ವಿದ್ಯುತ್ ವ್ಯವಸ್ಥೆ ಸ್ಥಗಿತವಾಗಿ ಕಾವೂರು ಫೀಡರ್ನಿಂದ ನೀಡಲಾಗಿದೆ. ಮೇಲ್ಸೇತುವೆಯ ಪಿಲ್ಲರ್ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಗಾಗಿ ಭಾರೀ ಪ್ರಮಾಣದಲ್ಲಿ ಮಣ್ಣು ಹಾಕಿರುವುದರಿಂದ ನದಿಯ ಹರಿವು ಒಂದೇ ಕಡೆ ಹೆಚ್ಚಿದ್ದು ಈ ಕುಸಿತಕ್ಕೆ ಕಾರಣ.
ಮಣ್ಣಿನ ಕೊರೆತದಿಂದ 30 ಅಡಿಗೂ ಹೆಚ್ಚು ಸ್ಥಳ, ಖಾಸಗಿ ಪ್ರವಾಸೋದ್ಯಮದ ಸ್ಥಳದಲ್ಲಿದ್ದ ಗುತ್ತಿನ ಮನೆಯ ಸೆಟ್ ಹಾಗೂ ವಿವಿಧ ಸಲಕರಣೆಗಳು ನದಿಯಲ್ಲಿ ಮುಳುಗಿ 12 ಲ.ರೂ.ಗಳಿಗೂ ಹೆಚ್ಚು ನಷ್ಟವಾಗಿದೆ.