ದ.ಕ.ದಲ್ಲಿ ನಿರ್ಬಂಧ ಬಿಗಿ; ಕಾಸರಗೋಡಿನಲ್ಲಿ ಸಡಿಲ!
Team Udayavani, Aug 5, 2021, 6:34 AM IST
ಮಂಗಳೂರು/ಕಾಸರಗೋಡು: ಕೊರೊನಾ ಉಲ್ಬಣಿಸುತ್ತಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಬಂಧ ಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ. ಆದರೆ ಇದೇ ವೇಳೆ ಅತ್ತ ಕೇರಳ ಸರಕಾರವು ಆರ್ಥಿಕತೆ ದೃಷ್ಟಿಯಿಂದ ಈಗಾಗಲೇ ಇರುವ ನಿರ್ಬಂಧಗಳನ್ನು ಸಡಿಲಗೊಳಿಸಿದೆ.
ಆ. 5ರಿಂದ ಆ. 15ರ ವರೆಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳು ಭಕ್ತರಿಗೆ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮಾತ್ರ ತೆರೆದಿರುತ್ತವೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರದೊಂದಿಗೆ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡು ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ತೀರ್ಥ, ಪ್ರಸಾದ ಸೇವೆಗಳು, ಅನ್ನಸಂತರ್ಪಣೆಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಶನಿವಾರ, ರವಿವಾರ ಭಕ್ತರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ವಸತಿ ಗೃಹಗಳಲ್ಲಿ ತಂಗುವುದಕ್ಕೂ ಅಂದು ಅವಕಾಶ ವಿರುವುದಿಲ್ಲ. ಎಲ್ಲ ರೀತಿಯ ಉತ್ಸವ ಸೇವೆಗಳು, ತೀರ್ಥ ಪ್ರಸಾದ, ಮುಡಿ ಸೇವೆಗಳನ್ನು ನಿರ್ಬಂಧಿಸಿ, ಆರ್ಚಕರಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ವಾರಾಂತ್ಯ ದಿನ ಹೊರತು ಉಳಿದ ದಿನಗಳಲ್ಲಿ ವಸತಿ ಗೃಹಗಳಲ್ಲಿ ತಂಗಲು ಬಯಸುವವರು 72 ಗಂಟೆಯೊಳಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರ ಹೊಂದಿರಲೇಬೇಕು. ಕೊಠಡಿಗಳಲ್ಲಿ ಕಡ್ಡಾಯವಾಗಿ ಹೆಚ್ಚುವರಿ ವ್ಯಕ್ತಿಗಳು ತಂಗಲು ಅವಕಾಶವಿರುವುದಿಲ್ಲ. ಎಲ್ಲ ಕೊಠಡಿಗಳನ್ನು ವಾಸ್ತವ್ಯಕ್ಕೆ ಮುಂಚೆ ಸ್ಯಾನಿಟೈಸ್ ಮಾಡಬೇಕು ಹಾಗೂ ಭಕ್ತರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.