ಬಪ್ಪನಾಡು ದೇಗುಲಕ್ಕೆ ಸ್ವರ್ಣ ಪಲ್ಲಕ್ಕಿ ಹಸ್ತಾಂತರ
ಸ್ವರ್ಣೋದ್ಯಮ ಕಾರ್ಯಾಗಾರದಲ್ಲಿ ನಿರ್ಮಾಣ
Team Udayavani, Feb 26, 2020, 2:03 AM IST
ಉಡುಪಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ದೇವಸ್ಥಾನ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ ನಿರ್ಮಿಸಿದ ನೂತನ ಸ್ವರ್ಣ ಪಲ್ಲಕ್ಕಿಯನ್ನು ದೇವಸ್ಥಾನದ ಪ್ರಮುಖರಿಗೆ ಸ್ವರ್ಣ ಜುವೆಲರ್ ಸಂಸ್ಥೆಯವರು ಮಂಗಳವಾರ ಕೆಳಾರ್ಕಳಬೆಟ್ಟು ಸ್ವರ್ಣೋದ್ಯಮ ಕಾರ್ಯಾಗಾರದಲ್ಲಿ ಭಕ್ತರ ಸಮ್ಮುಖ ಹಸ್ತಾಂತರಿಸಿದರು.
ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ್ ಶೆಟ್ಟಿ, ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ ಬಪ್ಪನಾಡು, ಕಾರ್ಯಾಧ್ಯಕ್ಷ ಶೇಖರ ಶೆಟ್ಟಿ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್, ಕಾರ್ಯನಿರ್ವಾಹಕ ಅಧಿ ಕಾರಿ ಜಯಮ್ಮ, ಸ್ವರ್ಣ ಸಂಸ್ಥೆಯ ನಿರ್ದೇಶಕರಾದ ಗುಜ್ಜಾಡಿ ರಾಮ ದಾಸ್ ನಾಯಕ್, ಮಾಧವ ನಾಯಕ್, ಪಲ್ಲಕ್ಕಿ ಸಮಿತಿಯ ಸಂಚಾಲಕ ಅತುಲ್ ಕುಡ್ವ ಉಪಸ್ಥಿತರಿದ್ದರು.
ರಾಮದಾಸ್ ನಾಯಕ್ ಅವರು ಮಾತನಾಡಿ, ದೇವರಿಗೆ ಪ್ರಿಯವಾದ ಸ್ವರ್ಣ ಪಲ್ಲಕ್ಕಿ ಹಸ್ತಾಂತರದ ಈ ಕ್ಷಣ ಸ್ವರ್ಣ ಜುವೆಲರ್ ಸಂಸ್ಥೆಯ ಇತಿಹಾಸದಲ್ಲೇ ಸುವರ್ಣದ ದಿನ. ಇಂತಹದ್ದೊಂದು ಅವಕಾಶ ಒಲಿದು ಬಂದದ್ದು ನಮ್ಮ ಭಾಗ್ಯ. ಚಿನ್ನದ ತೂಕ, ಶುದ್ಧತೆ ಕಾಪಾಡಿಕೊಂಡು ಕಲಾತ್ಮಕ ಶೈಲಿಯಲ್ಲಿ ಸ್ವರ್ಣ ಪಲ್ಲಕ್ಕಿ ನಿಗದಿತ ಅವಧಿಯಲ್ಲಿ ನಿರ್ಮಿಸಿ ನೀಡಿದ್ದೇವೆ ಎಂದರು. ದೇಗುಲದವರ ಸಹಕಾರ ಮತ್ತು ಸಂಸ್ಥೆಯ ಸಿಬಂದಿಯ ಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.
ಪಲ್ಲಕ್ಕಿ ತಯಾರಿಯ ಶಿಲ್ಪಿ ಅರ್ಜುನ್ ಆಚಾರ್ಯ ಹಾಗೂ ಗುಜ್ಜಾಡಿ ರಾಮದಾಸ್ ನಾಯಕ್ ಅವರನ್ನು ಗೌರವಿಸಲಾಯಿತು. ದೀಪಕ್ ನಾಯಕ್ ಸ್ವರ್ಣ ಜುವೆಲರ್ ಸಂಸ್ಥೆಯ ಕುರಿತು ವಿವರಿಸಿದರು. ತಂತ್ರಿ
ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿ, ಪೂಜಾ ವಂದಿಸಿದರು. ಅನಿತಾ ಸ್ವರ್ಣ ಸಂಸ್ಥೆ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸುನೀಲ್ ನಿರೂಪಿಸಿದರು.
11 ಕೆ.ಜಿ. ಚಿನ್ನ ಬಳಕೆ
ವಿಜಯದಶಮಿಯ ಶುಭ ದಿನ ಪಲ್ಲಕ್ಕಿ ನಿರ್ಮಾಣ ಆರಂಭಿಸ ಲಾಗಿತ್ತು. ಭಕ್ತರು ಸೇವೆಯ ರೂಪದಲ್ಲಿ ನೀಡಿದ್ದ 11 ಕೆ.ಜಿ. ತೂಕದ 22 ಕ್ಯಾರೆಟ್ ಚಿನ್ನದಿಂದ ಸ್ವರ್ಣ ಪಲ್ಲಕ್ಕಿ ಸಿದ್ಧಗೊಂಡಿದೆ. ಪಲ್ಲಕ್ಕಿಯ ಮಾರುಕಟ್ಟೆ ವೆಚ್ಚ 5 ಕೋ. ರೂ.ಗಳಿಗೂ ಅಧಿಕವಾಗಿದೆ.