ಗುರು ಎಂದೂ ಲಘುವಲ್ಲ : ಭಾಸ್ಕರ ರೈ ಕುಕ್ಕುವಳ್ಳಿ
Team Udayavani, Jul 14, 2017, 2:00 AM IST
ಮಹಾನಗರ: ಅರಿವು ಕಲಿಸಿದ ಗುರು ವಯಸ್ಸಿನ ಕಾರಣದಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದಿದ್ದರೂ ಶಿಷ್ಯರ ಪಾಲಿಗೆ ಎಂದೂ ಲಘುವಾಗುವುದಿಲ್ಲ. ಅಕ್ಷರವೊಂದನ್ನು ಕಲಿಸಿದಾತನೂ ಗುರುವೆ. ಅಂಥವರನ್ನು ಗೌರವಿಸುವುದರಿಂದ ಜೀವನದಲ್ಲಿ ಉತ್ಕರ್ಷ ಸಾಧ್ಯ ಎಂದು ಯಕ್ಷಗಾನ ಅರ್ಥಧಾರಿ ಮತ್ತು ಪ್ರಾಧ್ಯಾಪಕ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ನಿವೃತ್ತ ಹಿಂದಿ ಶಿಕ್ಷಕ ಬಿ. ರಾಮಕೃಷ್ಣ ಅವರಿಗೆ ಪ್ರಶಸ್ತಿ ವಿಜೇತ ತಾರಸಿ ಕೃಷಿಕ ಪಡ್ಡಂಬೈಲ್ ಕೃಷ್ಣಪ್ಪ ಗೌಡ ಅವರು ಏರ್ಪಡಿಸಿದ ಗುರುನಮನ ಕಾರ್ಯಕ್ರಮದಲ್ಲಿ ಅವರು ಅಭಿನಂದನ ಭಾಷಣ ಮಾಡಿದರು.
ಮೂಲತಃ ಬೇಕಲದವರಾದ ರಾಮಕೃಷ್ಣ ಅಜ್ಜಾವರ ಅವರು ಅಪಾರ ಶಿಷ್ಯವಾತ್ಸಲ್ಯ ಹೊಂದಿರುವ ಅಪರೂಪದ ಶಿಕ್ಷಕ ಎಂದರು. ಎಚ್. ಕಲಾವತಿ ರಾಮಕೃಷ್ಣ ಅವರನ್ನು ಸಮ್ಮಾನಿಸಲಾಯಿತು. ರಂಗನಟಿ ಜಯಶೀಲಾ, ಸಾಹಿತಿ ಲಕ್ಷ್ಮೀನಾರಾಯಣ ರೈ ಹರೇಕಳ, ಮಾಧವ ಬೇಕಲ್, ಜೀವನ್ ಬಿ.ಆರ್., ಆಮೋದ್ ಕುಮಾರ್, ಅಶ್ವಿತಾ ಎಚ್., ಗಹನಾ ಉಪಸ್ಥಿತರಿದ್ದರು. ಪಡ್ಡಂಬೈಲ್ ಕೃಷ್ಣಪ್ಪ ಗೌಡ ಸ್ವಾಗತಿಸಿದರು. ಮೀನಾಕ್ಷಿ ಕೆ. ಗೌಡ ವಂದಿಸಿದರು.