ತೆಂಕುಳಿಪಾಡಿ: ಪೊಳಲಿ ರಸ್ತೆ ಬಿರುಕು, ಮಣ್ಣು ಕುಸಿತ
Team Udayavani, Jul 19, 2017, 3:10 AM IST
ತೆಂಕುಳಿಪಾಡಿ: ಗಂಜಿಮಠ ಗ್ರಾ.ಪಂ. ವ್ಯಾಪ್ತಿಯ ತೆಂಕುಳಿಪಾಡಿ ಕಾಜಿಲಕೋಡಿ ಎಂಬಲ್ಲಿ ಮಳೆಯಿಂದಾಗಿ ಗುರುಪುರ ಕೈಕಂಬದಿಂದ ಪೊಳಲಿಗೆ ತೆರಳುವ ಲೋಕೋಪಯೋಗಿ ರಸ್ತೆ ಬದಿಯ ಮಣ್ಣು ಕುಸಿದಿದ್ದು, ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಕಳೆದ ಮಳೆಗಾಲದಲ್ಲಿ ಈ ರಸ್ತೆಯ ಮಣ್ಣು ಕುಸಿದ ಕಾರಣ ಅಲ್ಲಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ವಾಹನಗಳಿಗೆ ಅಪಾಯದ ಬಗ್ಗೆ ಅರಿವು ನೀಡಲಾಗಿತ್ತು. ಅ ಬಳಿಕ ಕಲ್ಲುಗಳನ್ನು ಇಡಲಾಗಿದೆ. ರಾತ್ರಿಯ ವೇಳೆ ಅಪಾಯ ಸೂಚಿಸುವ ಗುಂಟವನ್ನು ಹಾಕಲಾಗಿತ್ತು. ಇದು ನಡೆದು ಒಂದು ವರ್ಷ ಕಳೆದರೂ ಇಲಾಖೆ ರಸ್ತೆಯನ್ನು ದುರಸ್ತಿಪಡಿಸಿಲ್ಲ.
ಇಳಿಜಾರು ಮತ್ತು ಅಗಲ ಕಿರಿದಾದ ಈ ರಸ್ತೆ ಬಿರುಕು ಬಿಟ್ಟ ಸ್ಥಳದಲ್ಲೇ ತಿರುವು ಇದೆ. ವಾಹನಗಳು ಆಯತಪ್ಪಿ ಕೆಳಗೆ ಬಿದ್ದರೆ ಸುಮಾರು 25 ಅಡಿ ಅಳದ ಕಂದಕಕ್ಕೆ ಬೀಳಲಿದೆ.
ಎರಡು ವರ್ಷಗಳ ಹಿಂದೆ ಇಲ್ಲಿ ಮರಳು ಲಾರಿಯೊಂದು ಬಿದ್ದಿತ್ತು. ರಸ್ತೆಯ ಬದಿಯಲ್ಲಿ ಮಳೆ ನೀರು ಹರಿಯಲು ಚರಂಡಿಯೂ ಇಲ್ಲದಾಗಿದೆ. ಇದರಿಂದ ಮಳೆಯ ನೀರಿಗೆ ಮಣ್ಣು ಕೊರೆದು, ಈಗ ರಸ್ತೆ ಕುಸಿತಕ್ಕೆ ಆರಂಭವಾಗಿದೆ.
ಪೊಳಲಿ ದೇವಸ್ಥಾನ ಹಾಗೂ ಬಿ.ಸಿ. ರೋಡ್, ಬಂಟ್ವಾಳಕ್ಕೆ ಹೋಗುವ ಸಮೀಪದ ರಸ್ತೆ ಇದಾಗಿದೆ. ಬಿ.ಸಿ. ರೋಡ್- ಪೊಳಲಿ- ಕಟೀಲು- ಮೂಲ್ಕಿ ಹೆದ್ದಾರಿ ಪ್ರಸ್ತಾವನೆಯಲ್ಲಿರುವ ಈ ರಸ್ತೆ ಈಗ ವಾಹನಗಳಿಗೆ ಅಪಾಯ ತಂದೊಡ್ಡಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ರಸ್ತೆ ಸಂಪರ್ಕ ಕಡಿತವಾಗುವ ಸಂಭವವಿದೆ.
ಈ ಬಗ್ಗೆ ಸ್ಥಳೀಯರು ಈಗಾಗಲೇ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.