ಟಿಪ್ಪರ್ ಲಾರಿ-ಬೈಕ್ ಢಿಕ್ಕಿ; ಹಿಂಬದಿ ಸವಾರ ಸಾವು
Team Udayavani, Feb 10, 2017, 3:45 AM IST
ಕಡಬ: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ನ ಹಿಂಬದಿ ಸವಾರ ಪೆರಾಬೆ ಗ್ರಾಮದ ಮಾಯಿಲ್ಗ ನಿವಾಸಿ ಚೆನ್ನಪ್ಪ ಗೌಡ (60 ) ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ಕಡಬ ಗ್ರಾಮದ ಕಳಾರದಲ್ಲಿ ಸಂಭವಿಸಿದೆ.
ಬೈಕ್ ಚಲಾಯಿಸುತ್ತಿದ್ದ ಚೆನ್ನಪ್ಪ ಗೌಡರ ಪುತ್ರ ಜಗದೀಶ್ (25) ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯನಿಮಿತ್ತ ಕಡಬಕ್ಕೆ ಬಂದಿದ್ದ ತಂದೆ ಹಾಗೂ ಮಗ ಬೈಕ್ನಲ್ಲಿ ಪೆರಾಬೆಯ ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಳಾರದಲ್ಲಿ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಮೂಲತಃ ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿಯಾಗಿದ್ದ ಚೆನ್ನಪ್ಪ ಗೌಡರು 7 ವರ್ಷಗಳ ಹಿಂದೆ ಪೆರಾಬೆಯ ಮಾಯಿಲ್ಗದಲ್ಲಿ ಜಮೀನು ಖರೀದಿಸಿ ವಾಸ್ತವ್ಯ ಹೂಡಿದ್ದರು. ತೆಂಗಿನಕಾಯಿ ಹಾಗೂ ಅಡಿಕೆ ಕೀಳುವ ಕೆಲಸ ಮಾಡುತ್ತಿದ್ದ ಅವರು ಮರ ಕಡಿಯುವ ಕೆಲಸದಲ್ಲಿ ನಿಪುಣರಾಗಿದ್ದರು. ಮೃತ ಚೆನ್ನಪ್ಪ ಗೌಡರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.