ಮತಾಂತರ ಆರೋಪ : ಧ್ಯಾನ ಕೇಂದ್ರಕ್ಕೆ ಪೊಲೀಸ್ ದಾಳಿ
Team Udayavani, Jun 6, 2022, 12:29 AM IST
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಲ್ಯಾಡಿಯ ಕೋಣಾಲು ಆರ್ಲದಲ್ಲಿ ಶಿವಮೊಗ್ಗ ಮೂಲದ 27 ಜನರನ್ನು ಮತಾಂತರಗೊಳಿಸಲು ಕರೆಯಿಸಿ ಮೊರಿಯ ಧ್ಯಾನ ಕೇಂದ್ರದಲ್ಲಿ ಇರಿಸಲಾಗಿದೆ ಎನ್ನುವ ದೂರಿನನ್ವಯ ಉಪ್ಪಿನಂಗಡಿ ಪೊಲೀಸರು ಆ ಕೇಂದ್ರಕ್ಕೆ ಶನಿವಾರ ತಡರಾತ್ರಿ ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯವರು
ಪೊಲೀಸರ ದಾಳಿ ವೇಳೆ ಧ್ಯಾನ ಕೇಂದ್ರದಲ್ಲಿ 27 ಜನರಿದ್ದು, ಅವರಲ್ಲಿ 18 ಮಹಿಳೆಯರು, 8 ಮಂದಿ ಪುರುಷರು ಮತ್ತು 6 ವರ್ಷದ ಬಾಲಕನಿದ್ದ. ಅವರನ್ನೆಲ್ಲ ಪೊಲೀಸರು ವಿಚಾರಿಸಿದಾಗ, ತಾವು ಶಿವಮೊಗ್ಗ ಜಿಲ್ಲೆಯವರು, ತಮ್ಮಲ್ಲಿ ಮದ್ಯವ್ಯಸನಿಗಳೂ, ಮಾನಸಿಕ ಕಾಯಿಲೆಯಿಂದ ಬಳತ್ತಿರುವವರು ಇದ್ದಾರೆ. ಇಲ್ಲಿನ ಕೇಂದ್ರದಲ್ಲಿ ಧ್ಯಾನ ಮಾಡುವುದರಿಂದ ಆರೋಗ್ಯ ಸುಧಾರಿಸುವುದೆಂದು ಯೂ ಟ್ಯೂಬ್ನಲ್ಲಿ ವಿಚಾರ ತಿಳಿದು ಇಲ್ಲಿಗೆ ನಮ್ಮ ಸ್ವಂತ ಖರ್ಚಿನಲ್ಲಿ ಬಂದಿರುವುದಾಗಿ ತಿಳಿಸಿದ್ದಾರೆ.
ಮತಾಂತರಗೊಂಡಿಲ್ಲ
ನಾವು ಯಾರೂ ಮಾತಾಂತರ ಗೊಳ್ಳಲು ಬಂದಿರುವುದಿಲ್ಲ ಎಂದವರು ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ವೇಳೆ ಪೊಲಿಸರೊಂದಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ಇದ್ದರು.
ಇದನ್ನೂ ಓದಿ : ಮಲ್ಪೆ ಬೀಚ್: ಇಬ್ಬರ ರಕ್ಷಣೆ ; ಮುಂದುವರಿದ ಜನಸಂದಣಿ