ಮಾರಕಾಸ್ತ್ರ ಇರುವ, ದಾಖಲೆಗಳಿಲ್ಲದ ವಾಹನ ವಶ
Team Udayavani, Mar 15, 2019, 12:30 AM IST
ಮಂಗಳೂರು: ಚುನಾವಣೆಯ ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿರುವ 200ಕ್ಕೂ ಅಧಿಕ ಕ್ರಿಮಿನಲ್ ಹಿನ್ನೆಲೆಯ ರೌಡಿಗಳನ್ನು ಗುರುವಾರ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಪರೇಡ್ ಮಾಡಿಸಲಾಯಿತು.
ಬೆಳಗ್ಗೆ 5 ಗಂಟೆ ವೇಳೆಗೆ ಕಮಿಷನರೆಟ್ ವ್ಯಾಪ್ತಿಯ ಎಲ್ಲ ರೌಡಿಗಳ ಮನೆಗೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಉಳ್ಳಾಲದ ಒಂದು, ಸುರತ್ಕಲ್ನ ಎರಡು ಮನೆಗಳಲ್ಲಿ ಕೆಲವು ಮಾರಕಾಸ್ತ್ರಗಳನ್ನು ಮತ್ತು ದಾಖಲೆ ಪತ್ರಗಳಿಲ್ಲದ ವಾಹನಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡರು.
ಪರೇಡ್ ವೇಳೆ ಪೊಲೀಸ್ ಕಮಿಷನರ್
ಸಂದೀಪ್ ಪಾಟೀಲ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿಗಳಾದ ರಾಮರಾವ್, ಶ್ರೀನಿವಾಸ ಗೌಡ ಮತ್ತು ಸುಧೀರ್ ಹೆಗ್ಡೆ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಇದ್ದರು.
ಸಾವಿರ ಮಂದಿ ವಿರುದ್ಧ ಪ್ರತಿಬಂಧಕ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ. ಗುರುವಾರ ಬೆಳಗ್ಗೆ ಎಲ್ಲ ಸಕ್ರಿಯ ರೌಡಿಗಳ ಮತ್ತು ಸಮಾಜ ವಿರೋಧಿ ಕೃತ್ಯಗಳನ್ನು ಎಸಗುವವರ ಮನೆಗೆ ಸಂಬಂಧ ಪಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಅಪರಾಧ ಪತ್ತೆ ವಿಭಾಗದ ಪೊಲೀಸರು ವಿಶೇಷ ದಾಳಿ ಎಂದು ಕಮಿಷನರ್ ಸಂದೀಪ್ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.
ಬಹಿರಂಗ ಪರೇಡ್ ಮೊದಲು
ಚುನಾವಣೆ ವೇಳೆ ಕಮಿಷನರೇಟ್ ವ್ಯಾಪ್ತಿಯ ರೌಡಿ ಪಟ್ಟಿಯಲ್ಲಿರುವ ಕೆಲವರನ್ನು ಕರೆಸಿ ಯಾವುದೇ ಕಾನೂನು ಉಲ್ಲಂಘಟನೆ ಚಟುವಟಿಕೆಗಳಲ್ಲಿ ತೊಡಗದಂತೆ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು. ಆದರೆ ಈ ಸಲ ಜಿಲ್ಲೆಯ ಪ್ರಮುಖ ರೌಡಿಗಳನ್ನು ಜಿಲ್ಲಾ ಪೊಲೀಸ್ ಮೈದಾನಕ್ಕೆ ಬೆಳ್ಳಂಬೆಳಗ್ಗೆ ಕರೆಸಿ ಅಲ್ಲಿ ಬಹಿರಂಗ ಪರೇಡ್ ಮಾಡಿಸಲಾಗಿದೆ. ಮೂವರು ರೌಡಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿದೆ.