ಮತ ಎಣಿಕೆ ಕೇಂದ್ರಗಳು ಭದ್ರತೆ ಮುಕ್ತ!
Team Udayavani, May 25, 2019, 6:15 AM IST
ಸುರತ್ಕಲ್/ಉಡುಪಿ: ಒಂದು ತಿಂಗಳಿಗಿಂತಲೂ ಹೆಚ್ಚು ಅವಧಿಯಿಂದ ಪೊಲೀಸರ ಬಿಗಿ ಭದ್ರತೆಯ ನೆರಳಿನಲ್ಲಿದ್ದ ಸುರತ್ಕಲ್ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಗಳು ಗುರುವಾರದಿಂದ ಮುಕ್ತವಾಗಿವೆ.
ಎನ್ಐಟಿಕೆ ಸಂಸ್ಥೆಯ ಎರಡು ಬೃಹತ್ ಕಟ್ಟಡಗಳಲ್ಲಿ ಎ. 21ರ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಯಂತ್ರಗಳನ್ನು ಇರಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮೂರು ಪಾಳಿಗಳಲ್ಲಿ ಭದ್ರತೆಯಿತ್ತು. ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಕಟ್ಟಡಗಳ ಅಕ್ಕಪಕ್ಕ ನಡೆದಾಡುವುದಕ್ಕೂ ಅನುಮತಿಯ ಅಗತ್ಯವಿತ್ತು. ಸಿಸಿ ಕೆಮರಾ ಕಣ್ಗಾವಲು ಹಾಕಲಾಗಿತ್ತು. ಪ್ರತೀ ದಿನ ಜಿಲ್ಲಾಡಳಿತದ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ, ನಿಗಾ ಇತ್ತು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆ ಕೇಂದ್ರವಾಗಿತ್ತು. ಮೇ 23ರ ಮತ ಎಣಿಕೆಯ ಬಳಿಕ ಮತಯಂತ್ರ ಗಳನ್ನು ಸ್ವಸ್ಥಾನಕ್ಕೆ ರವಾನೆ ಮಾಡಲಾಗಿದ್ದು, ಭದ್ರತೆ, ಬ್ಯಾರಿಕೇಡ್ ತೆಗೆದು ಮುಕ್ತಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ರಜೆಯಿದ್ದರೂ ಅಧಿ ಕಾರಿಗಳಿಂದ ಸದಾ ತುಂಬಿರುತ್ತಿದ್ದ ಎನ್ಐಟಿಕೆ ಈಗ ಶಾಂತವಾಗಿದೆ.
ಅಂಗನವಾಡಿಯಿಂದ ತೊಡಗಿ ಪದವಿ ಪೂರ್ವದ ವರೆಗೆ ಶಿಕ್ಷಣ ಒದಗಿಸುವ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆ ತರಗತಿಗಳನ್ನು ಆರಂಭಿಸು ವುದಕ್ಕೆ ಸಿದ್ಧತೆಯಲ್ಲಿ ತೊಡಗಿದೆ.