ಮತದಾನ ಮುನ್ನಾದಿನ ಅಭ್ಯರ್ಥಿ ಮನ
Team Udayavani, Apr 18, 2019, 6:10 AM IST
ಮಂಗಳೂರು/ ಉಡುಪಿ: ಒಂದು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ಚುನಾವಣೆ ತಯಾರಿ, ಪ್ರಚಾರಗಳಲ್ಲಿ ವ್ಯಸ್ತರಾಗಿದ್ದು, ಕ್ಷಣವೂ ವಿರಾಮವಿಲ್ಲದೆ ಇದ್ದ ಅಭ್ಯರ್ಥಿಗಳು ಮತದಾನಕ್ಕೆ ಮುನ್ನಾದಿನ ಏನು ಮಾಡುತ್ತಿ ದ್ದರು ಎನ್ನುವುದು ಕುತೂಹಲಕಾರಿ. ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಅಭ್ಯರ್ಥಿಗಳು ಬುಧವಾರ ಅಂತಿಮ ಹಂತದ ಚುನಾವಣ ಕಾರ್ಯತಂತ್ರ ರೂಪಿಸುವಲ್ಲಿ ವ್ಯಸ್ತರಾಗಿದ್ದರು.
ನಳಿನ್ ಕುಮಾರ್ ಕಟೀಲು
ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಬುಧವಾರ ಮಂಗಳೂರಿನ ಬಿಜೆಪಿ ಚುನಾವಣ ಕಚೇರಿಯಲ್ಲಿ ಪಕ್ಷದ ನಾಯಕರ ಜತೆಗೆ ಸಮಾಲೋಚನೆ ನಡೆಸಿದರು. ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಹಿಂದೆ ಪಡೆದ ಮತಗಳು ಮತ್ತು ಈ ಬಾರಿಯ ನಿರೀಕ್ಷೆಯ ಕುರಿತಂತೆ ಮಾತುಕತೆ ನಡೆಸಿದರು.
ಮಿಥುನ್ ರೈ
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬುಧವಾರ ಬೆಳಗ್ಗಿನಿಂದಲೇ ಜಿಲ್ಲಾ ಕಾಂಗ್ರೆಸ್ ಪ್ರಚಾರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಜತೆಗೆ ಸಭೆ ನಡೆಸಿದರು. ಚುನಾವಣ ವಾತಾವರಣದ ಬಗ್ಗೆ ಚರ್ಚೆ ನಡೆಸಿದರು.
ಈ ಮಧ್ಯೆ ಉಳಿದ ಅಭ್ಯರ್ಥಿಗಳು ಪ್ರಚಾರದಿಂದ ಗುರುವಾರ ಸ್ವಲ್ಪ ರಿಲ್ಯಾಕ್ಸ್ ಮೂಡ್ನಲ್ಲಿದ್ದರು. ಆದರೆ ಪಕ್ಷದ ಕಾರ್ಯಕರ್ತರು ಮಾತ್ರ ಮನೆ ಮನೆ ಪ್ರಚಾರದಲ್ಲಿ ಭಾಗವಹಿಸಿದ್ದರು.
ಪ್ರಮೋದ್ ದಿನಚರಿ
ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಬುಧವಾರ ಉಪ್ಪೂರು, ಕುಂಜಿಬೆಟ್ಟು ಮತ್ತು ಕೊಡವೂರಿನಲ್ಲಿ ನಿಧನ ಹೊಂದಿದವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು. ಕಾರ್ಕಳ ವೆಂಕಟರಮಣ, ಹನುಮಂತ ದೇವಸ್ಥಾನ, ಚರ್ಚ್, ಬಸದಿ, ಗರೋಡಿಗಳಿಗೆ ತೆರಳಿದರು. ರಾತ್ರಿ ವೇಳೆ ಮನೆಗೆ ವಾಪಸಾದರು.
ಶೋಭಾ ದಿನಚರಿ
ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಬುಧವಾರ ಚಿಕ್ಕಮಗಳೂರು ಮತ್ತು ಉಡುಪಿಯ ಹಲವು ದೇವಸ್ಥಾನ, ಮಠಗಳಿಗೆ ಭೇಟಿ ನೀಡಿದರು.