ನೀರು ಪೋಲು, ಸ್ವಚ್ಛತೆ ಇಲ್ಲ, ನಿರ್ಮಾಣದಲ್ಲಿ ಬಿರುಕು
Team Udayavani, Dec 8, 2017, 10:19 AM IST
ಬಜಪೆ: ರಾಜ್ಯ ಸರಕಾರದ ಯೋಜನೆಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹಾಗೂ ವ್ಯವಸ್ಥೆಯ ಬಗ್ಗೆ ಜಿಲ್ಲಾ ಪಂಚಾಯತ್ನ ಸದನ ಸಮಿತಿ ಬುಧವಾರ ಹಾಗೂ ಗುರುವಾರ ಪರಿಶೀಲನೆ ನಡೆಸಿ, ಸಮಸ್ಯೆಗಳ ಪಟ್ಟಿ ಮಾಡಿದೆ.
ಸದನ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ನೇತೃತ್ವದಲ್ಲಿ ಈ ಸಮಿತಿ ಮಳವೂರು, ಬಜಪೆ, ಶಿರ್ತಾಡಿ, ನೆಲ್ಲಿಕಾರು, ಹೊಸಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬುಧವಾರ ಭೇಟಿ ನೀಡಿತು.
ಮಳವೂರಿನಲ್ಲಿರುವ ಕುಡಿಯುವ ನೀರಿನ ಘಟಕ ಸಮೀಪ ಸ್ವಚ್ಛತೆ ಇಲ್ಲ. ಬೇಲಿಯೂ ಇಲ್ಲ. ಪಡ್ಡೋಡಿಯ ಘಟಕವನ್ನು ತರಾತುರಿಯಲ್ಲಿ ಮಾಡಿದಂತಿದೆ. ನೆಲ ಬಿರುಕು ಬಿಟ್ಟಿದ್ದು, ಮಳೆಯ ನೀರು ನಿಂತಿದೆ. ಬಜಪೆ ಶಾಂತಿ ಗುಡ್ಡೆಯಲ್ಲಿರುವ ಘಟಕದಲ್ಲಿ ನೀರು ಪೋಲಾಗುತ್ತಿದೆ. ಎರಡು ರೂಪಾಯಿ ಕಾಯಿನ್ ಹಾಕಿದಾಗ 20 ಲೀಟರ್ ನೀರು ಬರುತ್ತದೆ. ಅವರಿಗೆ ಬೇಕಾದ ಒಂದು ಲೀಟರ್ ಮಾತ್ರ ಉಪಯೋಗವಾಗುತ್ತದೆ. ಬಾಕಿ ನೀರು ಪೋಲಾಗುತ್ತದೆ. ಇದು ಸಮೀಪದ ಹೂದೋಟಕ್ಕೆ ಹರಿಯುವಂತೆ ಅಥವಾ ಎಷ್ಟು ಬೇಕೋ ಅಷ್ಟೇ ನೀರು ಬರುವಂತೆ ಸ್ವಿಚ್ ಅಳವಡಿಸಬೇಕಿದೆ ಎಂದು ಸದನ
ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪತ್ರಿಕೆಗೆ ತಿಳಿಸಿದ್ದಾರೆ.
ತಂಡದಲ್ಲಿ ಸದನ ಸಮಿತಿಯ ಸದಸ್ಯರಾದ ಜಯಶ್ರೀ ಕೊಂಡಾಣ, ಶಯನಾ ಜಯಾನಂದ, ಸದಸ್ಯ ಕಾರ್ಯದರ್ಶಿ ಗೋಪಾಲಕೃಷ್ಣ, ಕೆಆರ್ ಡಿಐಎಲ್ನ ಎಕ್ಸಿಕ್ಯೂಟಿವ್ ಮಹದೇವ ಪ್ರಸಾದ್, ಜಿ.ಪಂ. ಎಂಜಿನಿಯರ್ ಪ್ರಭಾಕರ ಇದ್ದರು. ಬಜಪೆ ಗ್ರಾ.ಪಂ. ಉಪಾಧ್ಯಕ್ಷ ಮಹಮದ್ ಶರೀಫ್, ತಾ.ಪಂ. ಸದಸ್ಯೆ ಲತಾ ಸುವರ್ಣ, ಪಿಡಿಒ ಸಾಯೀಶ್ ಚೌಟ, ಸದಸ್ಯರಾದ ಲೋಕೇಶ್ ಪೂಜಾರಿ, ವೇದಾವತಿ, ಕರಾವಳಿ ಪ್ರಾಧಿಕಾರದ ಸದಸ್ಯ ಸಾಹುಲ್ ಹಮೀದ್ ಉಪಸ್ಥಿತರಿದ್ದರು.