“ಸಾಹಿತ್ಯಕ್ಕೆ ಸಂಗೀತ ಬೆರೆತಾಗ ಸೊಬಗು ಹೆಚ್ಚು’
Team Udayavani, Jul 13, 2017, 2:10 AM IST
ನೆಹರೂನಗರ : ಭಾವನೆಗಳಿಗೆ ಪದಗಳ ರೂಪ ಕೊಟ್ಟರೆ ಸಾಹಿತ್ಯವಾಗುತ್ತದೆ. ಅದರೊಂದಿಗೆ ಸಂಗೀತ ಬೆರೆತಾಗ ಅದರ ಸೊಬಗು ಹೆಚ್ಚಾಗುತ್ತದೆ ಎಂದು ವಿವೇಕಾನಂದ ಪ. ಪೂ. ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ನಂದಿನಿ ಹೇಳಿದರು.
ವಿವೇಕಾನಂದ ಕಾಲೇಜಿನ ತೃತೀಯ ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಸಾಹಿತ್ಯ ಮಂಟಪ -ಸಾಹಿತ್ಯ ಪ್ರಿಯ ಮನಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬರವಣಿಗೆ ಹಾಗೂ ಅದರ ಸೊಬಗಿನೊಂದಿಗೆ ನಮ್ಮತನ ಎಂಬುದನ್ನೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದರು.
ಸ್ವಂತಿಕೆಯನ್ನು ಬೆರೆಸಿ
ಬಾಲ್ಯದಲ್ಲಿ ರಚಿಸಿದ ಸಾಹಿತ್ಯಕ್ಕೆ ಬಾಲಿಶತೆಯ ಲೇಪನ ವಿರುತ್ತದೆ. ಪ್ರೌಢಶಾಲಾ- ಪದವಿಪೂರ್ವ ತರಗತಿಗೆ ಬಂದಾಗ ನಮ್ಮೊಂದಿಗೆ ನಮ್ಮ ಬರವಣಿಗೆಯೂ ಬೆಳೆಯುತ್ತದೆ. ಪದವಿ ಹಂತ ವಿಶೇಷವಾದದ್ದು. ಆಗ ನಾವೂ ಮತ್ತು ನಮ್ಮ ರಚನೆಗಳೆರಡೂ ಪ್ರೌಢತೆಯ ಹಾದಿಯಲ್ಲಿರುತ್ತವೆ. ನಮ್ಮ ರಚನೆಗೆ ಸ್ವಂತಿಕೆಯನ್ನು ಬೆರೆಸಿ ಬರೆಯುತ್ತಾ ಹೋದಂತೆ ಪಕ್ವಗೊಳ್ಳುತ್ತಾ ಹೋಗುತ್ತದೆ ಎಂದು ಹೇಳಿದರು.
ಅವಕಾಶ ಬಳಸಿಕೊಳ್ಳಿ
ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಗೀತಾ ಕುಮಾರಿ ಮಾತನಾಡಿ, ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡಾಗ ಬೆಳೆಯಲು ಸಾಧ್ಯ. ಪದವಿ ತರಗತಿಗಳಲ್ಲಿ ಯಥೇತ್ಛವಾದ ಅವಕಾಶಗಳು ಪಠ್ಯೇತರ ಚಟುವಟಿಕೆಗಳಿಂದ ದೊರೆಯುತ್ತವೆ. ಯಾರಾದರೂ ನಮ್ಮ ಬರವಣಿಗೆಯನ್ನು ವಿಮರ್ಶಿಸಿ ಮಾತನಾಡಿದಾಗ ಅದನ್ನು ಪ್ರೋತ್ಸಾಹದ ಮಾತುಗಳಾಗಿ ಸ್ವೀಕರಿಸಬೇಕೇ ವಿನಾ ಋಣಾತ್ಮಕವಾಗಿ ಅಲ್ಲ. ಇಂತಹ ವಿಮರ್ಶೆಗಳು ನಮ್ಮನ್ನು ನಾವು ಉತ್ತಮಪಡಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಎಚ್.ಜಿ. ಶ್ರೀಧರ್, ಸಾಹಿತ್ಯ ಮಂಟಪದ ಸಂಯೋಜಕ ಡಾ| ಮನಮೋಹನ, ಸಾಹಿತ್ಯ ಮಂಟಪ ಕಾರ್ಯದರ್ಶಿ ಶ್ರೀನಾಥ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರೀತಮ್, ಪೂಜಾ ಕೆ. ಸ್ವರಚಿತ ಕಥೆಗಳನ್ನು ವಾಚಿಸಿದರು. ಅಂತಿಮ ಪದವಿ ವಿದ್ಯಾರ್ಥಿನಿ ರೇಖಾ ಸ್ವಾಗತಿಸಿ, ಶ್ಯಾಮಲಾ ವಂದಿಸಿದರು. ಶಿವಶಂಕರ ಮಯ್ಯ ನಿರೂಪಿಸಿದರು.