Davanagere; ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳಿದ್ದೇನೆ: ಶಾಮನೂರು ಶಿವಶಂಕರಪ್ಪ
Team Udayavani, Aug 11, 2023, 6:55 PM IST
ದಾವಣಗೆರೆ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಸಹ ಟಿಕೆಟ್ ಕೇಳಿರುವೆ. ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಪುನರುಚ್ಚರಿಸಿದರು.
ಶುಕ್ರವಾರ ಮಹಾನಗರ ಪಾಲಿಕೆ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಪ್ರಕ್ರಿಯೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ನಾನೂ ಟಿಕೆಟ್ ಕೇಳುತ್ತೇನೆ. ಕೊಟ್ಟರೆ ಸ್ಪರ್ಧಿಸುತ್ತೇನೆ ಎಂದರು.
ನಮ್ಮ ಕಾಂಗ್ರೆಸ್ ನವರು ಯಾರೂ ಕಮಿಷನ್ ತೆಗೆದುಕೊಂಡಿಲ್ಲ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ಯಾವಾಗಲೂ ನಿಸ್ಸೀಮರು. ಕೆಲಸ ಮಾಡಿರುವ ಬಿಲ್ ಕೊಟ್ಟೇ ಇಲ್ಲ ಎಂದ ಮೇಲೆ ಕಮಿಷನ್ ಎಲ್ಲಿಂದ ಬರುತ್ತದೆ. ದುಡ್ಡು ಕೊಟ್ಟಿಲ್ಲ ಎಂದು ಮಾತನಾಡುತ್ತಾರೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಸತ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಹೆಂಗಿರಬಹುದು ಎಂದರು.
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ… ಎನ್ನುವಂತೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಈಗ ಕಾಂಗ್ರೆಸ್ನವರೇ ಅಧಿಕಾರಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.