ಸಿದ್ದು ಸಭಾಧ್ಯಕ್ಷರ ಕ್ಷಮೆ ಕೇಳಲಿ: ಈಶ್ವರಪ್ಪ
Team Udayavani, Oct 24, 2019, 9:00 PM IST
ದಾವಣಗೆರೆ:ವಿಧಾನಸಭಾ ಸಭಾಧ್ಯಕ್ಷ ಸ್ಥಾನ ಬಹಳ ಪವಿತ್ರವಾದದ್ದು, ಆ ಸ್ಥಾನ ಅಲಂಕರಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಬಗ್ಗೆ ಅಗೌರವವಾಗಿ ಮಾತನಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಕ್ಷಣ ಕ್ಷಮೆಯಾಚಿಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಂತ ಹಿರಿಯರಾದ ಕಾಗೇರಿ ಅವರನ್ನು ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ, ಸಿದ್ದರಾಮಯ್ಯ ತಮಗೆ ಸಭಾಧ್ಯಕ್ಷರು ಮಾತನಾಡಲು ಅವಕಾಶವನ್ನೇ ನೀಡುವುದಿಲ್ಲ ಎಂಬುದಾಗಿ ಏಕವಚನದಿಂದ ಮಾತನಾಡಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಭಾರಿ ಭಾಷಣ ಮಾಡುವ ಸಿದ್ದರಾಮಯ್ಯನವರಿಗೆ ಸಭಾಧ್ಯಕ್ಷ ಸ್ಥಾನದ ಮಹತ್ವ ಗೊತ್ತಿಲ್ಲವೇ ಎಂದರು.
ಸಿದ್ದರಾಮಯ್ಯ ನಡವಳಿಕೆ ಅತ್ಯಂತ ಖಂಡನೀಯ. ತಕ್ಷಣ ಸಭಾಧ್ಯಕ್ಷರು ಹಾಗೂ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಮುಂದೆ ಹೇಗೆ ನಡೆದುಕೊಳ್ಳತ್ತಾರೆ ಎಂಬುದನ್ನು ಗಮನಿಸಿ, ನಂತರ ಮುಂದಿನದನ್ನು ಯೋಚಿಸಲಾಗುವುದು. ರಮೇಶಕುಮಾರ್ ಈ ಹಿಂದೆ ಸಭಾಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ಹೇಳಿದಂಗೆ ಕುಣಿದರು. ಅವರು ಸಿದ್ದರಾಮಯ್ಯ ಕೈಗೊಂಬೆಯಾಗಿದ್ದರು ಎಂಬುದು ಅನರ್ಹ ಶಾಸಕರ ಬಗ್ಗೆ ತೀರ್ಪು ನೋಡಿದರೆ ತಿಳಿಯಲಿದೆ. ಆಗ, ಸಿದ್ದರಾಮಯ್ಯ ಹಾಗೂ ರಮೇಶಕುಮಾರ್ ಇಬ್ಬರೂ ಪರಸ್ಪರ ಹೊಗಳಿಕೊಂಡರು. ಆದರೆ, ಈಗ ಸಭಾಧ್ಯಕ್ಷರ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ರಮೇಶಕುಮಾರ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ರಾಜ್ಯದ ಜನ ನಿರೀಕ್ಷೆ ಮಾಡುತ್ತಿದ್ದಾರೆ ಎಂದರು.