ಸೂಪರ್ ಮಾರ್ಕೆಟ್ನಲ್ಲಿ ಕಾಂಕ್ರೀಟ್ ರಸ್ತೆ ಸದ್ದು
Team Udayavani, Jul 7, 2021, 9:33 AM IST
ಧಾರವಾಡ: ಹುಬ್ಬಳ್ಳಿಯ ಸೂಪರ್ ಮಾರ್ಕೆಟ್ (ಜನತಾ ಬಜಾರ್) ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಅತ್ಯಾಧುನಿಕ ಮಾರುಕಟ್ಟೆಯಾಗಿ ಅಭಿವೃದ್ಧಿ ಹೊಂದುವತ್ತ ಸಾಗಿದರೆ ಧಾರವಾಡದ ಸೂಪರ್ ಮಾರುಕಟ್ಟೆ ಮಾತ್ರ ಅತ್ತ ಸೂಪರೂ ಆಗದೇ ಇತ್ತ ಸ್ಮಾಟ್ ಆಗದೇ ಪಾಪರ್ ಆಗಿಯೇ ಉಳಿದಿದ್ದು, ಸದ್ಯಕ್ಕೆ ಈ ಮಾರುಕಟ್ಟೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಜೆಸಿಬಿ ಯಂತ್ರಗಳ ಸದ್ದು ಮಾತ್ರ ಜೋರಾಗಿ ಕೇಳುವಂತಾಗಿದೆ.
ಹೌದು. ಸೂಪರ್ ಮಾರುಕಟ್ಟೆಯನ್ನು ಅಭಿವೃದ್ಧಿ ಮಾಡಿ, ಸೂಪರ್ ಮಾಡಲು ನೂರಾರು ಕೋಟಿ ರೂ.ಗಳ ಯೋಜನೆ ಸಿದ್ಧವಾಗಿದ್ದು ಬಿಟ್ಟರೆ ಈವರೆಗೂ ಧಾರವಾಡಿಗರ ಈ ಕನಸು ನನಸಾಗೆ ಇಲ್ಲ. ಆದರೆ ಈಗ ಮಾರುಕಟ್ಟೆಯ ಮುಖ್ಯ ಹಾಗೂ ಒಳರಸ್ತೆಗಳ ಅಭಿವೃದ್ಧಿಗೆ ಚಾಲನೆ ದೊರೆತಿದ್ದು, ಇದರಿಂದ ಮಾರುಕಟ್ಟೆಯಲ್ಲಿನ ಕೆಲ ಅಂಗಡಿಗಳ ತೆರವು ಕಾರ್ಯಾಚರಣೆ ಸಾಗಿದೆ. ಇದು ಕೆಲ ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ.
ಕಾಂಕ್ರೀಟ್ ರಸ್ತೆ ನಿರ್ಮಾಣ: ಮಾರುಕಟ್ಟೆ ಸೂಪರ್ ಮಾಡುವ ಪ್ರಸ್ತಾವಗಳಿಗೆ ಮನ್ನಣೆ ಸಿಗದ ಕಾರಣ ಮಾರುಕಟ್ಟೆಯ ಒಳರಸ್ತೆಗಳ ಸುಧಾರಣೆ, ಗಟಾರು ನಿರ್ಮಾಣ ಕಾರ್ಯಕ್ಕೆ ಕಳೆದ ವರ್ಷದ ಆರಂಭದಲ್ಲಿ ಶಾಸಕ ಅರವಿಂದಬೆಲ್ಲದ ಚಾಲನೆ ನೀಡಿದ್ದರು. ಅದರನ್ವಯ98 ಲಕ್ಷ ಹಾಗೂ 31 ಲಕ್ಷ ರೂ.ಗಳ ಎರಡುಪ್ರತ್ಯೇಕ ಕಾಮಗಾರಿಗಳ ಅಡಿ ಮಾರುಕಟ್ಟೆಯ ಪ್ರಮುಖ ನಾಲ್ಕು ಒಳರಸ್ತೆಗಳ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಗಟಾರು ನಿರ್ಮಾಣ ಕಾರ್ಯ ಸಾಗಿದೆ. ಈಗಾಗಲೇ ಒಂದು ಬದಿ ಕಾಂಕ್ರೀಟ್ ರಸ್ತೆ, ಗಟಾರು ನಿರ್ಮಾಣವೂ ಆಗಿದೆ. ಮಾರುಕಟ್ಟೆಯ ಪ್ರಮುಖ ರಸ್ತೆಯಲ್ಲಿಕಾಂಕ್ರೀಟ್ ರಸ್ತೆ ನಿರ್ಮಾಣ ಆಗಿದ್ದು, ಇದೀಗ ಮಾರುಕಟ್ಟೆಯ ಒಳರಸ್ತೆಗಳ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಅಂಗಡಿಗಳ ತೆರವು: ಈ ಒಳ ರಸ್ತೆಗಳ ನಿರ್ಮಾಣಕ್ಕಾಗಿ ರಸ್ತೆಯಲ್ಲಿ ಬರುವ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣಕ್ಕೆ ಕಳೆದತಿಂಗಳಷ್ಟೇ ಚಾಲನೆ ನೀಡಲಾಗಿತ್ತು. ಇದಕ್ಕೆ ಆಗ ಅಂಗಡಿಕಾರರು, ಕೆಲ ರಾಜಕೀಯ ಮುಖಂಡರಿಂದ ವಿರೋಧ ವ್ಯಕ್ತವಾಗಿತ್ತು. ಸ್ವಯಂ ಪ್ರೇರಣೆಯಿಂದ ತೆರವು ಮಾಡಿಕೊಳ್ಳಲು ಅಂಗಡಿಕಾರರು ಅವಕಾಶ ಕೇಳಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ ಅಂಗಡಿಕಾರರಿಗೆ ನೀಡಿದ್ದ ಸಮಯದ ಅವಕಾಶಮುಗಿದರೂ ಕೆಲ ಅಂಗಡಿಕಾರರು ತೆರವು ಮಾಡಿರಲಿಲ್ಲ. ಈ ಬಗ್ಗೆ ನೀಡಿದ ಎಚ್ಚರಿಕೆಗಳಿಗೂ ಮಣೆ ಹಾಕಿರಲಿಲ್ಲ. ಹೀಗಾಗಿ ಪಾಲಿಕೆ ವಲಯಕಚೇರಿ ಸಹಾಯಕ ಆಯುಕ್ತ ಎಂ.ಬಿ. ಸಬರದ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡುಜು.3, ಜು.4 ರಂದು ಒಟ್ಟು 2 ದಿನಗಳಲ್ಲಿ 54 ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಇದಲ್ಲದೇ ಇನ್ನೊಂದು ಬದಿಯ ಸರ್ವೇ ಕಾರ್ಯ ಮುಗಿಸಿರುವ ಪಾಲಿಕೆ ಅಲ್ಲಿನ ಅಂಗಡಿಕಾರರಿಗೆ ಸ್ವಯಂ ಪ್ರೇರಣೆಯಿಂದ ಅಂಗಡಿ ತೆರವು ಮಾಡಿಕೊಳ್ಳುವಂತೆ ಸೂಚಿಸಿದೆ. ಇದಕ್ಕೆ ಸ್ಪಂದನೆ ಕೊಡದಿದ್ದರೆ ಜೆಸಿಬಿ ಯಂತ್ರಗಳಮೂಲಕ ಅಂಗಡಿ ತೆರವು ಕಾರ್ಯಾಚರಣೆ ಮಾಡಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ಆದರೆ ಸೂಪರ್ ಮಾರುಕಟ್ಟೆಯ ಅಭಿವೃದ್ಧಿಗಾಗಿ ಸಿದ್ಧಗೊಂಡಿದ್ದ ಸೂಪರ್ ಯೋಜನೆಗಳೆಲ್ಲವೂ ಪಾಪರ್ ಆಗಿವೆ. ಸ್ಮಾಟ್ಸಿಟಿ ಯೋಜನೆಯಡಿ ಸ್ಮಾಟ್ ಆಗುವ ನಿರೀಕ್ಷೆಯೂ ಹುಸಿಯೂ ಆಗಿದೆ. ಅತಿಕ್ರಮಣ ಆಗುತ್ತಲೇ ಸಾಗಿರುವ ಈಮಾರುಕಟ್ಟೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಪಾಲಿಕೆಯ ಇಚ್ಛಾಶಕ್ತಿಯ ಕೊರತೆ ಇದ್ದು, ಇದಲ್ಲದೇ ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಈವರೆಗೂ ಸೂಪರ್ ಅಭಿವೃದ್ಧಿ ಕಾಣದಂತಾಗಿದೆ.
60 ಅಡಿ ರಸ್ತೆ ನಿರ್ಮಾಣಕ್ಕೆ ಕೆಲವರ ವಿರೋಧ : ಈಗಾಗಲೇ ಮಾರುಕಟ್ಟೆಯ ಮುಖ್ಯ ರಸ್ತೆ ಕಾಂಕ್ರೀಟ್ಮಯ ಆಗಿದ್ದು, ಗಟಾರು ನಿರ್ಮಾಣ ಕಾರ್ಯವೂ ಮುಗಿದಿದೆ. ಈಗ ಒಳರಸ್ತೆಗಳ ಸುಧಾರಣೆಗೆ ಮುಂದಾಗಿರುವ ಪಾಲಿಕೆ, ರಸ್ತೆಯ ಅನಧಿಕೃತ ಅಂಗಡಿಗಳ ತೆರವು ಕಾರ್ಯ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ ಪ್ರತಿ ತಿಂಗಳು ಪಾಲಿಕೆಗೆ ಕರ ಕಟ್ಟಿ ಬದುಕು ಕಟ್ಟಿಕೊಂಡಿದ್ದ ಈ ವ್ಯಾಪಾರಸ್ಥರ ಬದುಕು ಈಗ ಬೀದಿಗೆ ಬಿದ್ದಿದೆ. ರಸ್ತೆ ನಿರ್ಮಾಣಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ 50-60 ಪೂಟ್ ರಸ್ತೆ ನಿರ್ಮಾಣಕ್ಕಾಗಿ ಅಗಲೀಕರಣದಿಂದ ಅಂಗಡಿಗಳು ನೆಲಸಮ ಆಗುತ್ತಿವೆ. ಹೀಗಾಗಿ ರಸ್ತೆ ಅಗಲೀಕರಣ ಅಧಿಕವಾಗಿದ್ದು, ಇದನ್ನು ಕೈಬಿಡಬೇಕೆಂಬುದು ವ್ಯಾಪಾರಸ್ಥರ ಬೇಡಿಕೆಯಾಗಿದೆ.
ಒಂದು ಕಾಲದಲ್ಲಿ ಇಡೀ ನಗರಕ್ಕೆ ನೀರು ಪೂರೈಸುತ್ತಿದ್ದ ಹಾಲಗೇರಿ ಕೆರೆ ಕಾಲ ಕ್ರಮೇಣ ನೀರು ಮಾಯವಾಗಿ ಕೆರೆ ಮಾರುಕಟ್ಟೆಯಾಗಿ ಪರಿವರ್ತನೆ ಆಗಿದೆ ಎಂಬುದು ಈ ಸೂಪರ್ ಮಾರುಕಟ್ಟೆಯ ಇತಿಹಾಸ. ಧಾರವಾಡದ ಮೂಲ ಮಾರುಕಟ್ಟೆ ರವಿವಾರ ಪೇಟೆಯಲ್ಲಿತ್ತು. ಕೆಸರು ಗುಂಡಿಯಾಗಿದ್ದ ಹಾಲಗೇರಿಯಲ್ಲಿ ಮಾರುಕಟ್ಟೆ ನಿರ್ಮಿಸಿ, ಮಾರುಕಟ್ಟೆ ಸ್ಥಳಾಂತರಗೊಂಡಿದೆ. ಅಂದಾಜು 5 ಎಕರೆ ವಿಸ್ತೀರ್ಣದಲ್ಲಿ ಇರುವ ಈ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಗಳು 10 ಕೋಟಿಯಿಂದ ಆರಂಭವಾಗಿ 200-300 ಕೋಟಿಗೆ ಏರಿಕೆಯಾಗಿದ್ದು ಬಿಟ್ಟರೆ ಅವು ಮಾತ್ರ ಹಾಗೆ ನನೆಗುದಿಗೆ ಬಿದ್ದಿವೆ. ಇದೀಗ ಮಾರುಕಟ್ಟೆಯ ರಸ್ತೆಗಳ ಅಗಲೀಕರಣ, ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಸಾಗಿದ್ದು, ಇದರ ಜತೆಗೆ ಮೂಲಸೌಕರ್ಯ ಒದಗಿಸುವತ್ತ ಗಮನ ಹರಿಸಬೇಕಿದೆ.
ಕಳೆದ 40 ವರ್ಷಗಳಿಂದ ನಾವೇ ಮಳಿಗೆ ನಿರ್ಮಿಸಿಕೊಂಡು ವ್ಯಾಪಾರ ಮಾಡಿಕೊಂಡು ಬಂದಿದ್ದು, ಪ್ರತಿ ತಿಂಗಳು ಪಾಲಿಕೆಗೆ 600 ರೂ. ಬಾಡಿಗೆ ಭರಿಸುತ್ತೇವೆ.ಈ ರೀತಿ 400ಕ್ಕೂ ಹೆಚ್ಚು ಜನರ ಮಳಿಗೆ ಇದ್ದು, ಇದೀಗ ರಸ್ತೆ ನಿರ್ಮಾಣದಿಂದ ಅಂಗಡಿ ಕಳೆದು ಕೊಳ್ಳಲಿದ್ದೇವೆ. ದಯವಿಟ್ಟು ನಮಗೆ ಪರ್ಯಾಯ ವ್ಯವಸ್ಥೆ ನಿರ್ಮಿಸಿ, ತೆರವು ಮಾಡಬೇಕು. ಇಲ್ಲವೇ ರಸ್ತೆ ನಿರ್ಮಾಣ ಜತೆಗೆ ಮಳಿಗೆಯನ್ನೂ ನಿರ್ಮಾಣ ಮಾಡಿ ಪಾಲಿಕೆಯೇ ವ್ಯಾಪಾರಸ್ಥರಿಗೆ ಬಾಡಿಗೆ ಕೊಡಲಿ.-ಮಹಮ್ಮದಹುಸೇನ ತಮಟಗಾರ, ಬಾಂಡೇ ಅಂಗಡಿ ಮಾಲೀಕ.
ಸೂಪರ್ ಮಾರುಕಟ್ಟೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುತ್ತಿದ್ದು, ಈ ರಸ್ತೆಯ ಮಾರ್ಗದಲ್ಲಿ ಅನಧಿಕೃತ ಆಗಿರುವ ಮಳಿಗೆಗಳನ್ನು ತೆರವು ಮಾಡಲಾಗಿದೆ. ಕೆಲವರು ಸ್ವಯಂ ಪ್ರೇರಣೆಯಿಂದಲೂ ತೆರವು ಮಾಡಿಕೊಂಡಿದ್ದಾರೆ. ಇದಲ್ಲದೇ ಇನ್ನೂ ಕೆಲ ಅನಧಿಕೃತ ಅಂಗಡಿಗಳಿಗೆ ಸೂಚನೆ ನೀಡಿದ್ದು, ಸ್ವಯಂ ಪ್ರೇರಣೆಯಿಂದ ತೆರವು ಮಾಡದಿದ್ದರೆ ಜೆಸಿಬಿ ಯಂತ್ರದ ಮೂಲಕ ತೆರವು ಮಾಡಲಾಗುವುದು.– ಎಂ.ಬಿ.ಸಬರದ, ಸಹಾಯಕ ಆಯುಕ್ತ, ಪಾಲಿಕೆ ವಲಯ ಕಚೇರಿ, ಧಾರವಾಡ
ಕಾಂಕ್ರೀಟ್ ರಸ್ತೆ ನಿರ್ಮಾಣದ ನೆಪದಲ್ಲಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ವ್ಯಾಪಾರಸ್ಥರೊಂದಿಗೆ ಚರ್ಚೆ ಕೈಗೊಂಡು, ಕಾನೂನಾತ್ಮಕ ಅಥವಾ ಸಾರ್ವಜನಿಕ ಹೋರಾಟದ ಮೂಲಕ ನ್ಯಾಯ ಪಡೆಯಲು ಮುಂದಾಗುತ್ತೇವೆ.– ಪಿ.ಎಚ್.ನೀರಲಕೇರಿ, ಹೋರಾಟಗಾರ
-ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
MUST WATCH
ಹೊಸ ಸೇರ್ಪಡೆ
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು