ಆಧಾರ್ಗೆ ದುಬಾರಿಯಾದ ಗೆಜೆಟೆಡ್ ರುಜು
Team Udayavani, Feb 1, 2020, 11:26 AM IST
ಸಾಂಧರ್ಬಿಕ ಚಿತ್ರ
ಹುಬ್ಬಳ್ಳಿ: ಆಧಾರ್ ಸೇವೆಗೆ ಅಲೆದಾಡಿ ಬೇಸತ್ತಿದ್ದ ಜನತೆಗೆ ಹುಬ್ಬಳ್ಳಿಯ ಕ್ಲಬ್ ರಸ್ತೆಯಲ್ಲಿ ಬೃಹತ್ ಆಧಾರ್ ಕೇಂದ್ರ ಆರಂಭವಾಗಿದ್ದು, ರಾತ್ರಿ ಇಡೀ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳ ಎದುರು ಸರತಿಯಲ್ಲಿ ನಿಲ್ಲುವ ಶಿಕ್ಷೆಯಿಂದ ಬಿಡುಗಡೆಯಾಗಿದೆ.
ಆದರೆ, ಸೂಕ್ತ ದಾಖಲೆ ಇಲ್ಲದವರು ಗೆಜೆಟೆಡ್ ಅಧಿಕಾರಿಗಳ ಸಹಿ ಪಡೆಯಲು ಕಚೇರಿಯಿಂದ ಕಚೇರಿಗೆ ಪರದಾಡುತ್ತಿದ್ದಾರೆ. ಈ ಮೊದಲು ಆಧಾರ್ ಸಂಖ್ಯೆ ಪಡೆದವರು ಹಾಗೂ ಹೊಸದಾಗಿ ಆಧಾರ್ ನೋಂದಣಿ ಮಾಡಿಸಿಕೊಳ್ಳುವವರ ಬಳಿ ಸೂಕ್ತ ದಾಖಲೆ ಇರದಿದ್ದರೆ ಅಥವಾ ದಾಖಲೆಗಳ ದೃಢೀಕರಣಕ್ಕೆ ಗೆಜೆಟೆಡ್ ಅಧಿಕಾರಿಗಳಿಂದ ದಾಖಲೆ ಪತ್ರಗಳಿಗೆ ಸಹಿ ಹಾಗೂ ಸೀಲ್ ಪಡೆಯಬೇಕಿರುವುದು ಕಡ್ಡಾಯ. ಆದರೆ, ಈ ಸಹಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರಿಂದ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ.
ಇಲ್ಲಿ ಸಹಿ ಮಾಡಲ್ಲ: “ಆಧಾರ್ ಸಂಬಂಧಿಸಿದ ರಹವಾಸಿ ಪತ್ರಗಳಿಗೆ ಇಲ್ಲಿ ಸಹಿ ಮಾಡುವುದಿಲ್ಲ. ದಯವಿಟ್ಟು ಸಹಕರಿಸಿ’ ಎನ್ನುವ ಪೋಸ್ಟರ್ ಗಳನ್ನು ಕೆಲ ಅಧಿಕಾರಿಗಳು ಕಚೇರಿ ಬಾಗಿಲಿಗೆ ಅಂಟಿಸಿದ್ದಾರೆ. ಸಹಿ ಬಗ್ಗೆ ಕೇಳಿದರೆ ಇದು ನನ್ನ ಕೆಲಸವಲ್ಲ ಎಂದು ಕಡ್ಡಿ ತುಂಡರಿಸಿದಂತೆ ಹೇಳಿ ಕಳಿಸುತ್ತಿದ್ದಾರೆ. ಇದರಿಂದಾಗಿ ಸಹಿ ಯಾರ ಬಳಿ ಮಾಡಿಸಬೇಕೆಂಬುದೇ ಸಾರ್ವಜನಿಕರಿಗೆ ಗೊಂದಲಕ್ಕೆ ಕಾರಣವಾಗಿದೆಯಲ್ಲದೆ, ಅಧಿಕಾರಿಯ ಸಹಿಗಾಗಿ ಪರದಾಡುವಂತಾಗಿದೆ.
ನಿತ್ಯ 700 ಟೋಕನ್: ಕ್ಲಬ್ ರಸ್ತೆಯ ಆಧಾರ್ ಕೇಂದ್ರದಲ್ಲಿ ನಿತ್ಯ 700ಕ್ಕೂ ಅಧಿಕ ಜನರು ಆಧಾರ್ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಈ ಮೊದಲು ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ನಿತ್ಯ 20-40 ಟೋಕನ್ ವಿತರಿಸಲಾಗುತ್ತಿತ್ತು. ವಿಶೇಷ ಎಂದರೆ ಸುಮಾರು ಎರಡು ತಿಂಗಳ ನಂತರದ ದಿನಾಂಕ ನೀಡಿ ಟೋಕನ್ ಕೊಡಲಾಗುತ್ತಿತ್ತು. ಆ ಎಲ್ಲ ಸಂಕಷ್ಟ ಪರಿಹರಿಸಿರುವ ಕ್ಲಬ್ ರಸ್ತೆಯಲ್ಲಿರುವ ನೂತನ ಆಧಾರ್ ಕೇಂದ್ರದಲ್ಲಿ ಬೆಳಗ್ಗೆ ಟೋಕನ್ ಪಡೆದು ಸಂಜೆಯೊಳಗಾಗಿ ಆಧಾರ ಸೇವೆ ತಿದ್ದುಪಡಿ ಅಥವಾ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ, ಎಲ್ಲ ಬಗೆಯ ತಿದ್ದುಪಡಿಗೂ ಗೆಜೆಟೆಡ್ ಅಧಿ ಕಾರಿಗಳ ಸಹಿ ಹಾಗೂ ಸೀಲ್ ಇರುವ ಫಾರ್ಮ್ ತರಲು ಹೇಳುತ್ತಿರುವುದು ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ.
ಏನಿದು ಗೆಜೆಟೆಡ್ ಫಾರ್ಮ್?: ಆಧಾರ್ ಸೇರಿದಂತೆ ಪಾನ್, ವೋಟರ್ ಐಡಿ, ಪಾಸ್ಪೋರ್ಟ್ ಹೀಗೆ ವಿವಿಧ ದಾಖಲೆ ಪಡೆಯಲು ನಮ್ಮ ಜನ್ಮದಾಖಲೆ ಅಥವಾ ವಿಳಾಸ ಪುರಾವೆಗಳನ್ನು ನೋಡಿ (ಆಧಾರ್ ಅಪ್ಡೆಟ್ ಗಾಗಿ ಗೆಜೆಟೆಡ್ ಫಾರ್ಮ್) ಮೇಲೆ ಆಧಾರ್ ಸಂಖ್ಯೆ, ಹೆಸರು, ವಿಳಾಸ ಹಾಗೂ ಜನ್ಮದಿನಾಂಕ ನಮೂದಿಸಿ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಣಕ್ಕೆ ಸಹಿ ಹಾಗೂ ಸೀಲ್ ಮಾಡಿಸಿಕೊಳ್ಳಬೇಕು. ಇದನ್ನು ಲಗತ್ತಿಸಿ ಆಧಾರ್ ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.
ಯಾರು ಗೆಜೆಟೆಡ್ ಅಧಿಕಾರಿಗಳು?: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎ, ಬಿ ಹಾಗೂ ಸಿ ಗ್ರೇಡ್ನ ಅಧಿಕಾರಿಗಳು ಗೆಜೆಟೆಡ್ ಸಹಿ ಮಾಡಲು ಅರ್ಹರಿರುತ್ತಾರೆ. ಆಯುಕ್ತರು, ಉಪ ಆಯುಕ್ತರು, ಮಹಾನಗರ ಪಾಲಿಕೆಯ ವಲಯ ಕಚೇರಿ ಸಹಾಯಕ ಆಯುಕ್ತರು, ತಹಶೀಲ್ದಾರರು, ಸರಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ತಜ್ಞ ವೈದ್ಯರು, ಕಾರ್ಯ ನಿರ್ವಾಹಕ ಅಭಿಯಂತರು, ಬಿಇಒ, ಡಿಡಿಪಿಐ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ, ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ವಿವಿಧ ಇಲಾಖೆಯ ಎ ಹಾಗೂ ಬಿ ಗ್ರೇಡ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಧಾರ್ ಸಂಬಂಧಿತ ಫಾರ್ಮ್ಗೆ ಸಹಿ ಮಾಡಬಹುದಾಗಿದೆ.
ಎಲ್ಲದಕ್ಕೂ ಗೆಜೆಟೆಡ್ ಸಹಿ ಅಗತ್ಯವೇ? : ಆಧಾರ್ ತಿದ್ದುಪಡಿಗೆ ಬರುವವರು ಕಡ್ಡಾಯವಾಗಿ ಗೆಜೆಟೆಡ್ ಅಧಿಕಾರಿಗಳ ಸಹಿ ಹಾಗೂ ಸೀಲ್ ಪಡೆಯಲೇ ಬೇಕು ಎಂದೇನಿಲ್ಲ. ವೋಟರ್ ಐಡಿ, ಪಾನ್ ಕಾರ್ಡ್, ಜನ್ಮದಾಖಲೆ, ಗ್ಯಾಸ್ ಬಿಲ್, ಬ್ಯಾಂಕ್ ಪಾಸ್ಬುಕ್, ಶಾಲಾ ದಾಖಲೆ, ನರೇಗಾ ಜಾಬ್ ಕಾರ್ಡ್, ಸರ್ಕಾರಿ ಸಿಬ್ಬಂದಿಯಾಗಿದ್ದರೆ ಐಡಿ ಕಾರ್ಡ್ ಸೇರಿದಂತೆ ಹಲವು ದಾಖಲೆ ನೀಡಿ ತಿದ್ದುಪಡಿಗೆ ಅವಕಾಶವಿದೆ ಎಂದು ಯುಐಡಿಎಐ ಮಾರ್ಗದರ್ಶನದಲ್ಲಿ ಸೂಚಿಸಲಾಗಿದೆ. ಗೆಜೆಟೆಡ್ ಅಧಿಕಾರಿಗಳ ಸಹಿ ಪಡೆಯಲು ಸಾರ್ವಜನಿಕರಿಂದ ಕೆಲ ಮಧ್ಯವರ್ತಿಗಳ ಅಥವಾ ಆಯಾ ಕಚೇರಿಯ ಸಿಬ್ಬಂದಿ 100-500ರೂ.ವರೆಗೆ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗ್ರೇಡ್ “ಎ’ ಎಂದರೆ ಕೇವಲ ತಹಶೀಲ್ದಾರ್ ಮಾತ್ರ ಬರಲ್ಲ. ವಿವಿಧ ಇಲಾಖೆಯಲ್ಲಿ ಗ್ರೇಡ್ “ಎ’ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯ ನಿಮಿತ್ತ ಹೊರಗೆ ಹೋದ ವೇಳೆ ಗೆಜೆಟೆಡ್ ಫಾರ್ಮ್ಗಳಿಗೆ ಸಹಿ ಮಾಡಲು ಆಗುತ್ತಿಲ್ಲ. ಸಹಿಗಾಗಿ ಹಣ ಪಡೆವ ಮಧ್ಯವರ್ತಿಗಳ ಕುರಿತು ಗಮನಕ್ಕೆ ಬಂದಿದ್ದು, ಎಲ್ಲ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಗಮನಕ್ಕೆತರಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಪರಿಹಾರವಾಗಲಿದೆ. –ಶಶಿಧರ ಮಾಡ್ಯಾಳ, ತಹಶೀಲ್ದಾರ್
ಎಲ್ಲದಕ್ಕೂ ಗೆಜೆಟೆಡ್ ಅಧಿಕಾರಿಗಳ ಸಹಿ ಇರುವ ಫಾರ್ಮ್ ಅಗತ್ಯವಿಲ್ಲ. ಅವರ ಬಳಿ ಇರುವ ದಾಖಲೆಯ ಒರಿಜಿನಲ್ ಪ್ರತಿ ತಂದರೆ ಸಾಕು. ನೂಕುನುಗ್ಗಲು ತಡೆಗೆ ಬೆಳಗ್ಗೆ 8ರಿಂದ 9 ಗಂಟೆ ವರೆಗೆ 700 ಟೋಕನ್ ವಿತರಿಸಲಾಗುತ್ತಿದೆ. ಅಲ್ಲದೆ ಜನರು ಆನ್ಲೈನ್ ಟೋಕನ್ ಸಹ ಪಡೆಯಬಹುದಾಗಿದೆ. ಗೆಜೆಟೆಡ್ ಸಹಿಗಾಗಿ ಯಾರಿಗೂ ಹಣ ಕೊಡುವ ಅಗತ್ಯವಿಲ್ಲ ಎಂದು ನಿತ್ಯ ಸಾರ್ವಜನಿಕರಲ್ಲಿ ಹೇಳುತ್ತಲೇ ಇದ್ದೇವೆ. –ಪವನ್ ನಡುವಿನಮನಿ, ಆಧಾರ್ ಕೇಂದ್ರದ ಕಾರ್ಯಾಚರಣೆ ಮುಖ್ಯಸ್ಥ
ನಾವು ಬ್ಯಾರೆ ಊರಿಂದ ಮುಂಜಾನೇನ ಬಂದಿವ್ರಿ, ಪ್ಯಾನ್ಕಾರ್ಡ್, ವೋಟರ್ ಎಲ್ಲಾ ತಂದ್ರೂ ಗೆಜೆಟೆಡ್ ಫಾರ್ಮ್ ಸಹಿ ಸಲುವಾಗಿ ಎಲ್ಲಾಕಡೆ ತಿರುಗಾಡಿ ಸಾಕಾತ್ರಿ.. ಯಾರೂ ಮಾಡೋಲ್ರು. ಇವರ ನೋಡಿದ್ರ ಅದೇ ಬೇಕ ಅನಾತಾರ. –ಹನಮಂತ ಮೆಂಡಗುದ್ಲಿ, ಸಾರ್ವಜನಿಕ
-ಸೋಮಶೇಖರ ಹತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ