ಗುರುಕುಲ ಮೌಲ್ಯವೃದ್ಧಿಯತ್ತ ಆರೆಸ್ಸೆಸ್ ಚಿತ್ತ
Team Udayavani, Jul 3, 2018, 6:00 AM IST
ಹುಬ್ಬಳ್ಳಿ: ಗುರುಕುಲ ಶಿಕ್ಷಣ ಪುನರುತ್ಥಾನ ನಿಟ್ಟಿನಲ್ಲಿ ಆರ್ಎಸ್ಎಸ್ನ ಭಾರತೀಯ ಶಿಕ್ಷಣ ಮಂಡಲ ಮಹತ್ವದ ಹೆಜ್ಜೆ ಇರಿಸಿದೆ. ಕರ್ನಾಟಕ ಸೇರಿ ದೇಶದಲ್ಲಿ ಹೊಸ ಗುರುಕುಲ ಸ್ಥಾಪನೆ, ಈಗಿರುವ ಗುರುಕುಲಗಳ ಮೌಲ್ಯವರ್ಧನೆ ಜತೆಗೆ ಆಧುನಿಕ ಶಿಕ್ಷಣ ಶಾಲಾ-ಕಾಲೇಜುಗಳಲ್ಲಿ ಗುರುಕುಲ ಮೌಲ್ಯ ಜಾರಿಗೆ ಮುಂದಾಗಿದೆ.
ಭಾರತೀಯ ಶಿಕ್ಷಣ ಮಂಡಲ ಈಗಾಗಲೇ 32 ರಾಜ್ಯಗಳ, 220 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಹ ಸಂಚಾಲಕ, ಕನ್ನಡಿಗ ಶಂಕರಾನಂದ ಅವರು ಹೇಳುವ ಪ್ರಕಾರ, ಈ ವರ್ಷ 400
ಜಿಲ್ಲೆಗಳಿಗೆ ಕಾರ್ಯವನ್ನು ವಿಸ್ತರಿಸಲು ನಿರ್ಧರಿಸಿದೆ.
ಭಾರತೀಯ ಶಿಕ್ಷಣ ಮಂಡಲದ ಧ್ಯೇಯ-ಚಿಂತನೆ, ಕೈಗೊಳ್ಳಬೇಕಾದ ತಯಾರಿ, ಮುಂದಿನ ಹೆಜ್ಜೆ, ಕಾರ್ಯಕ್ಷೇತ್ರದ ವಿಸ್ತರಣೆ ಇನ್ನಿತರ ವಿಷಯಗಳ ಕುರಿತಾಗಿ ಅವರು “ಉದಯವಾಣಿ’ಯೊಂದಿಗೆ ಮಾತನಾಡಿದರು. ಗುರುಕುಲ ಪದಟಛಿತಿಯಲ್ಲಿ ಶಿಕ್ಷಣ ಎಂಬುದು ಬದುಕಿನ ಮೌಲ್ಯವಾಗಿತ್ತು. ಸಂಸ್ಕಾರ, ಪರಂಪರೆ, ಸಂಸ್ಕೃತಿ, ಧೈರ್ಯ, ಕ್ಷಮತೆಯಂತಹ ಗುಣಗಳು ವಿದ್ಯಾರ್ಥಿಗಳಿಗೆ ಮನನವಾಗುತ್ತಿತ್ತು.
ಮತ್ತೀಗ ಅದೇ ಮೌಲ್ಯ ತುಂಬುವ ಕಾರ್ಯಕ್ಕೆ ಮಂಡಲ ಮುಂದಾಗಿದೆ.ಪ್ರತಿ ಜಿಲ್ಲೆಗೊಂದು ತಂಡ: ಗುರುಕುಲ ಪ್ರಕಲ್ಪದಡಿ ಹೊಸ ಗುರುಕುಲಗಳ ಸ್ಥಾಪನೆ, ಇರುವ ಗುರು ಕುಲಗಳ ಮೌಲ್ಯವರ್ಧನೆ ಕಾರ್ಯ ಕೈಗೊಳ್ಳಲಾಗುವುದು. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 4, ಗರಿಷ್ಠ 12 ಜನರಿರುವ ತಂಡ ರಚಿಸಲಾಗಿದ್ದು, ಶಿಕ್ಷಣದ ಚಿಂತನೆ, ದಾಖಲೀಕರಣ ಕಾರ್ಯವನ್ನು ಮಾಡುತ್ತದೆ.
ಶಿಕ್ಷಣ ಮತ್ತು ವಿಷಯ ತಜ್ಞರನ್ನೊಳಗೊಂಡ ಮತ್ತೂಂದು ತಂಡ, ಪಠ್ಯ ರಚನೆ, ವಿಷಯಗಳ ಪರಿಕಲ್ಪನೆ ಕಾರ್ಯವನ್ನು ಮಾಡಲಿದೆ. ಈ ಪದ್ಧತಿಯಡಿ ರೂಪುಗೊಳ್ಳುವ ವಿದ್ಯಾರ್ಥಿ ಮುಖ್ಯವಾಗಿ ವಿದ್ವತ್, ಆಧುನಿಕ ಶಿಕ್ಷಣದ ಉತ್ತಮ ಅಂಶ, ಉಪನಿಷತ್ತು, ಗೀತೆ, ಷಡ್ದರ್ಶನ, ರಾಮಾಯಣ, ಮಹಾ ಭಾರತವನ್ನು ಅರಿತವರಾಗಿ ಇರುತ್ತಾರೆ. ಮಾನವೀಯತೆ ಹಾಗೂ ಸಂಸ್ಥೆ ನಿರ್ವಹಣೆ ಸಾಮರ್ಥ್ಯದ ಜತೆಗೆ ಸ್ಥಿತಿಯ ಮೌಲ್ಯಾಂಕನ, ಸಾತ್ವಿಕತೆಯ ಸಾಧನವಾಗಿ ಹೊರಹೊಮ್ಮುವಂತಾಗಬೇಕು ಎಂಬ ಉದ್ದೇಶ ಹೊಂದಲಾಗಿದೆ ಎಂದರು.
ಐದು ಆಯಾಮ ಭಾರತೀಯ ಶಿಕ್ಷಣ ಮಂಡಲ ಕೈಗೊಂಡಿರುವ ಶೈಕ್ಷಣಿಕ ಪುನರುತ್ಥಾನವನ್ನು ಐದು ಆಯಾಮಗಳಡಿ ರೂಪಿಸಲಾಗುತ್ತಿದೆ. ಅನುಸಂಧಾನ(ಸಂಶೋಧನೆ), ಪ್ರಮೋದನ(ಜಾಗೃತಿ), ಪ್ರಶಿಕ್ಷಣ(ದೃಷ್ಟಿಕೋನ), ಪ್ರಕಾಶನ
(ಪ್ರಕಟಣೆ) ಹಾಗೂ ಸಂಘಟನೆ ಈ ಆಯಾಮಗಳಡಿ ಶಿಕ್ಷಣ ನೀಡಿದರೆ,ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯದ ಜತೆಗೆ ಸಮಾಜ,ದೇಶಕ್ಕೆ ಕೊಡುಗೆ ನೀಡುವ ಮನೋಭಾವ ಗಟ್ಟಿಗೊಳ್ಳುತ್ತದೆ. ಅಲ್ಲದೆ, 6 ಪ್ರಕೋಷ್ಠಗಳನ್ನಾಗಿ ವಿಭಾಗಿಸಲಾಗುತ್ತಿದೆ. ಅನುಷ್ಠಾನ ಪ್ರಕೋಷ್ಠದಲ್ಲಿ ಶಾಲೆ ಮತ್ತು ಉನ್ನತ ಶಿಕ್ಷಣಕ್ಕೆ ಪ್ರತ್ಯೇಕವಾಗಿ ಕೈಗೊಳ್ಳಲಾಗುತ್ತದೆ. ಶೈಕ್ಷಿಕ ಪ್ರಕೋಷ್ಠದಡಿ ಪಠ್ಯ ತಯಾರಿಕೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಸುಮಾರು 43 ಬೋರ್ಡ್ ಆಫ್ ಸ್ಟಡೀಸ್ ಜತೆ ಸಂಪರ್ಕ ಹೊಂದಲಾಗಿದೆ. ಪ್ರಕಲ್ಪ ಪ್ರಕೋಷ್ಠದಡಿ ಮಹಿಳಾ ಪ್ರಕಲ್ಪ ಹಾಗೂ ಗುರುಕುಲ ಪ್ರಕಲ್ಪ ಎಂದು ವಿಂಗಡಿಸಲಾಗುತ್ತಿದೆ.
ಆಧುನಿಕತೆ ಶಿಕ್ಷಣದ ಬೆನ್ನು ಬಿದ್ದು,ನಮ್ಮ ಮಕ್ಕಳು ಸಂಕುಚಿತ ಮನೋಭಾವ ಅಂಕ-ರ್ಯಾಂಕ್ ಗಳಿಕೆ ಬೆನ್ನೇರಿ
ಸಂಸ್ಕಾರಯುತ, ವಾಸ್ತವಿಕ ಬದುಕಿನ ಮೌಲ್ಯಗಳಿಂದ ದೂರವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಶಿಕ್ಷಣ
ಮಂಡಲ ಪರಿಪೂರ್ಣ, ಮೌಲ್ಯಯುತ ಶಿಕ್ಷಣ ದರ್ಶನಕ್ಕೆ ಮುಂದಾಗಿದೆ.
– ಶಂಕರಾನಂದ, ರಾಷ್ಟ್ರೀಯ ಸಹ ಸಂಚಾಲಕ,
ಭಾರತೀಯ ಶಿಕ್ಷಣ ಮಂಡಲ
– ಅಮರೇಗೌಡ ಗೋನವಾರ