ಕನಸಾಗೇ ಉಳಿದ ಟೌನ್ಹಾಲ್ ನವೀಕರಣ
ಅಕ್ರಮ ಚಟುವಟಿಕೆಗಳ ತಾಣ | ಭರವಸೆಗಳು ಇನ್ನೂ ಗೌಣ | ಆಳುವವರ ಇಚ್ಛಾಶಕ್ತಿ ಕೊರತೆ ಅನಾವರಣ
Team Udayavani, Aug 5, 2019, 8:37 AM IST
ಹುಬ್ಬಳ್ಳಿ: ಆಧುನಿಕ ಸ್ಪರ್ಶ ನೀಡುವ ಮೂಲಕ ಟೌನ್ಹಾಲ್ನ್ನು ನವೀಕರಿಸಿ ವೃತ್ತಿಪರ ರಂಗಭೂಮಿ ಕಲಾವಿದರಿಗೆ ಮೀಸಲಿಡಬೇಕು ಎನ್ನುವುದು ಕನಸಾಗಿಯೇ ಉಳಿದಿದೆ. ಸ್ಥಳೀಯ ಜನಪ್ರತಿನಿಧಿಗಳ ಅಸಡ್ಡೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲಾರಾಧನೆಯ ಸ್ಥಳ ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಪಾಲಿಕೆ ಒಡೆತನದಲ್ಲಿರುವ ಏಳನೇ ದಶಕದ ಸನಿಹದಲ್ಲಿರುವ ಈ ಭವನ ನಗರದ ಐತಿಹಾಸಿಕ ಕಟ್ಟಡಗಳ ಪೈಕಿ ಒಂದು. ಇಂತಹ ಭವನ ಉಳಿಸಿಕೊಳ್ಳಬೇಕು ಎನ್ನುವ ಕಾರಣದಿಂದ 2011-12ರಲ್ಲಿ ನವೀಕರಣದ ಚಿಂತನೆಗಳು ನಡೆದವು. ಇದಕ್ಕೆ ಪೂರಕವಾಗಿ ಕ್ರಿಯಾಯೋಜನೆ, ಅನುದಾನ, ಗುತ್ತಿಗೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಂಡವು. 2012-13ರಲ್ಲಿ ನವೀಕರಣಕ್ಕಾಗಿ ಮುಖ್ಯಮಂತ್ರಿಗಳ 100 ಕೋಟಿ ವಿಶೇಷ ಅನುದಾನದಲ್ಲಿ 1.5 ಕೋಟಿ ರೂ. ಮೀಸಲಿಡಲಾಯಿತು. ಅನುದಾನ ಕೊರತೆಯುಂಟಾದರೆ ಹೆಚ್ಚುವರಿಯಾಗಿ ನೀಡಲು ವ್ಯವಸ್ಥೆ ಕಲ್ಪಿಸಲಾಯಿತು. ವಿಚಿತ್ರ ಎಂದರೆ ಚುನಾವಣೆ ನಂತರ ಸರಕಾರ ಬದಲಾದ ಪರಿಣಾಮ ಈ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿತು.
ಪಾಲಿಕೆ ಇಚ್ಛಾಶಕ್ತಿ ಕೊರತೆ: ಸರಕಾರಗಳು ಬದಲಾದರೂ ಈ ಐತಿಹಾಸಿಕ ಕಟ್ಟಡ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕೂಡ ಚಿಂತನೆ ಮಾಡಲಿಲ್ಲ. ನಗರದ ಹೃದಯ ಭಾಗದಲ್ಲಿರುವ ಭವನ ನಿರ್ಲಕ್ಷಿಸುವುದರ ಜೊತೆಗೆ ಕಲಾವಿದರ ಚಟುವಟಿಕೆಗಳಿಗೂ ಕಡಿವಾಣ ಹಾಕಿದಂತಾಯಿತು. 14ನೇ ಹಣಕಾಸು ಯೋಜನೆಯಲ್ಲಿ ಇಂತಹ ಕಟ್ಟಡಗಳ ನವೀಕರಣ, ದುರಸ್ತಿಗೆ ಒಂದಿಷ್ಟು ಹಣ ವಿನಿಯೋಗಿಸಲು ಅವಕಾಶವಿದ್ದರೂ ಮಹಾನಗರ ಪಾಲಿಕೆ ಮುಂದಾಗಲಿಲ್ಲ.
ಐತಿಹಾಸಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಇಚ್ಛಾಶಕ್ತಿಯುಳ್ಳ ಪಾಲಿಕೆ ಆಯುಕ್ತರ ಹಾಗೂ ಸದಸ್ಯರ ಕೊರತೆಯಿಂದ ಭವನ ದುಸ್ಥಿತಿ ತಲುಪಿದೆ. ಹಳೆಯ ಕಟ್ಟಡಕ್ಕಾಗಿ ಜಿಲ್ಲಾಧಿಕಾರಿಗೆ ನಾವ್ಯಾಕೆ ಗೋಗರೆಯಬೇಕು ಎನ್ನುವ ಪಾಲಿಕೆ ಸದಸ್ಯರ ಧೋರಣೆಯಿಂದಾಗಿ ಕಲಾರಾಧನೆಯ ಸ್ಥಳ ಇಂದು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಅಕ್ಕಪಕ್ಕದಲ್ಲಿ ಗ್ಯಾರೇಜ್ಗಳು ಇರುವ ಪರಿಣಾಮ ಹಗಲು ಹೊತ್ತಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣವಿದೆ.
ಈಡೇರದ ಭರವಸೆ: ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನ, ವಿವಾಹ ಸಮಾರಂಭ, ಸಮಾವೇಶಗಳು ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳಿಗೆ ಟೌನ್ಹಾಲ್ ಬಳಕೆಯಾಗುತ್ತಿತ್ತು. ನಗರದಲ್ಲಿ ಇನ್ನೂ ಮೂರು ಭವನಗಳು ಇರುವ ಕಾರಣಕ್ಕೆ ಇದನ್ನು ವೃತ್ತಿಪರ ರಂಗಭೂಮಿ ಕಲಾವಿದರಿಗೆ ವೇದಿಕೆಯಾಗಿಸಬೇಕು. ದಿ| ಬಸವರಾಜ ಗುಡಗೇರಿ ಅವರ ಹೆಸರನ್ನಿಡಬೇಕು ಎಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವ್ ಕೂಡ ಪಾಸ್ ಮಾಡಲಾಗಿತ್ತು.
ಟೌನ್ಹಾಲ್ ನವೀಕರಣಕ್ಕೆ ರಂಗಭೂಮಿ ಕಲಾವಿದರ ಆಗ್ರಹಪೂರ್ವಕ ಮನವಿಯಿದೆ. ನಗರದಲ್ಲಿ ವೃತ್ತಿ ರಂಗಭೂಮಿ ನಾಟಕ ಪ್ರದರ್ಶನಕ್ಕೆ ಯಾವುದೇ ಸ್ಥಳವಿಲ್ಲ. ಆದಷ್ಟು ತ್ವರಿತವಾಗಿ ನವೀಕರಣಗೊಳಿಸಿ ಟೌನ್ಹಾಲ್ನ್ನು ವೃತ್ತಿ ರಂಗಭೂಮಿ ನಾಟಕ ಪ್ರದರ್ಶನಕ್ಕೆ ಮೀಸಲಿಡಬೇಕು. ಎಲ್ಲ ನಾಟಕ ಕಂಪನಿಗಳಿಗೂ ದೊರೆಯುವಂತೆ ವ್ಯವಸ್ಥೆ ಕಲ್ಪಿಸಬೇಕು.• ಚಿಂದೋಡಿ ಶಂಭುಲಿಂಗಪ್ಪ, ಪ್ರಧಾನ ಕಾರ್ಯದರ್ಶಿ, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ
•ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ