ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ
ಮುಖ್ಯಮಂತ್ರಿ ಕುಮಾರಸ್ವಾಮಿ-ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕೃತಿ ದಹಿಸಿ ಆಕ್ರೋಶ
Team Udayavani, Jun 22, 2019, 1:33 PM IST
ಗಜೇಂದ್ರಗಡ: ಮೀಸಲಾತಿಗಾಗಿ ಒತ್ತಾಯಿಸಿ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮುಖಂಡರು ಕಾಲಕಾಲೇಶ್ವರ ಮೃತ್ತದಲ್ಲಿ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ಗಜೇಂದ್ರಗಡ: ಪರಿಶಿಷ್ಟ ಪಂಗಡಕ್ಕೆ ಕೇಂದ್ರದಲ್ಲಿ ನೀಡಲಾಗುತ್ತಿರುವ ಸಂವಿಧಾನಾತ್ಮಕ ಮೀಸಲಾತಿಯನ್ನು ರಾಜ್ಯದಲ್ಲಿಯೂ ವಿಸ್ತರಿಸದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ವಾಲ್ಮೀಕಿ ಸಮುದಾಯ ಮುಖಂಡರು ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕೃತಿ ದಹಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿಯನ್ನು ಈಗಾಗಲೇ ಕೇಂದ್ರ ಸರ್ಕಾರ ನೀಡಿದೆ. ಆದರೆ ರಾಜ್ಯ ಸರ್ಕಾರ ಈವರೆಗೂ ಜಾರಿಗೊಳಿಸದೆ ಹಿಂದುಳಿದ ಸಮುದಾಯದ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ. 1978ರಿಂದ ಈವರೆಗೂ ಮೀಸಲಾತಿ ಕುರಿತು ಹೋರಾಟಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡ ಜನಾಂಗದ ಅಭಿವೃದ್ಧಿಗೆ ತೊಡಕನ್ನುಂಟು ಮಾಡುತ್ತಿದೆ. ನಮ್ಮ ಸಮುದಾಯಕ್ಕೆ ಮೀಸಲಾತಿಯನ್ನು ರಾಜ್ಯ ಸರ್ಕಾರ ಕಲ್ಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಟಿಗೆ ಕೇಂದ್ರ ಸರ್ಕಾರ ಮದಲಿನಿಂದಲೂ ಶೇ. 3ರಷ್ಟು ಮೀಸಲಿರಿಸಿದ್ದು, ಅದಕ್ಕೆ ಹೊಸದಾಗಿ ಜಾತಿಗಳನ್ನು ಸೇರಿಸಿದರೂ ಪ್ರಮಾಣ ಮಾತ್ರ ಹೆಚ್ಚಳ ಮಾಡದಿರುವುದು ಅನ್ಯಾಯಕ್ಕೆ ಕಾರಣವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಶೇ. 7.5ರಷ್ಟು ಮೀಸಲಾತಿ ಕಲ್ಪಿಸಿದ್ದು, ಅದರಂತೆ ಆಯಾ ಚುನಾವಣೆಗೆ ಕ್ಷೇತ್ರಗಳನ್ನು ಎಸ್ಟಿಗೆ ಮೀಸಲಿಬೇಕು. ಸರ್ಕಾರಗಳು ಮೀಸಲಾತಿ ನೀಡುವಲ್ಲಿ ಒಂದಿಲ್ಲೊಂದು ನೆಪಗಳನ್ನೊಡ್ಡುವುದನ್ನು ಬಿಟ್ಟು ಎಸ್ಟಿಗೆ ಸಂವಿಧಾನಾತ್ಮಕ ಮೀಸಲಾತಿ ನೀಡಲು ಮುಂದಾಗದಿದ್ದರೆ ಕರ್ನಾಟಕ ಬಂದ್ ಕರೆ ನೀಡಿ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಅಧ್ಯಕ್ಷ ಯಮನಪ್ಪ ತಳವಾರ, ಶರಣಪ್ಪ ಉಪ್ಪಿನಬೆಟಗೇರಿ, ಎಚ್.ಪಿ. ತಳವಾರ, ಎಸ್.ಎಂ. ಯಲಬುರ್ಗಿ, ಎಸ್.ಎಂ. ತಳವಾರ, ವಿ.ಎಸ್. ಗೌಡರ, ಎಂ.ಎಂ. ಯಲಬುರ್ಗಿ ಸೇರಿದಂತೆ ಇತರರು ಇದ್ದರು.