Drought: ಮೇವು ಸಂಗ್ರಹಕ್ಕೆ ಮುಂದಾದ ರೈತರು
Team Udayavani, Dec 16, 2023, 3:09 PM IST
ಚನ್ನರಾಯಪಟ್ಟಣ: ತಾಲೂಕಿನಲ್ಲಿ ಪ್ರಸಕ್ತ ವರ್ಷ ಮಳೆಯಾಗದೆ ಬರಗಾಲಕ್ಕೆ ತುತ್ತಾಗಿದ್ದು, ರಾಸುಗಳಿಗೆ ಮೇವಿನ ಕೊರತೆ ಎದುರಾಗುವ ಲಕ್ಷಣಗಳು ಗೋಚರವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಮೇವು ಶೇಖರಣೆಗೆ ಮುಂದಾಗುತ್ತಿದ್ದಾರೆ.
ಹೇಮಾವತಿ ನಾಲಾ ಪ್ರದೇಶದಲ್ಲಿ ಈಗಾಗಲೇ ಭತ್ತ ಒಕ್ಕಣೆ ಮಾಡಲಾಗುತ್ತಿದೆ. ಅಲ್ಲಿನ ಭತ್ತದ ಹುಲ್ಲನ್ನು ತಂದು ಶೇಖರಣೆ ಮಾಡಿಕೊಂಡರೆ ಮುಂದೆ ಎದುರಾಗಬಹುದಾದ ಮೇವಿನ ಕೊರತೆ ನೀಗಿಸಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ರೈತರು ನಾಲೆಬಯಲು ಪ್ರದೇಶದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.
ಮಲೆನಾಡಿನತ್ತ ಸಂಚಾರ: ರಾಜ್ಯ ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ರಾಸುಗಳಿಗೆ ಮೇವಿನ ಸಮಸ್ಯೆ ಬರದಂತೆ ಮೇವಿನ ಬೀಜ ವಿತರಣೆ ಮಾಡಿಲ್ಲ, ಒಂದು ವೇಳೆ ಮೇವಿನ ಬೀಜ ವಿತರಣೆ ಮಾಡಿದರೆ ಕೊಳವೆಬಾವಿ ಇಲ್ಲದ ರೈತರಿಗೆ ಮೇವಿನ ಬೀಜದಿಂದ ಪ್ರಯೋಜನ ಆಗಲಾರದು. ಹಾಗಾಗಿ ಮೇವು ಸಂಗ್ರಹಣೆ ಮಾಡಬೇಕಿದೆ. ಬೇಸಿಗೆ ಪ್ರಾರಂಭವಾದ ಮೇಲೆ ಮೇವಿಗೆ ಹೆಚ್ಚು ಬೇಡಿಕೆ ಇರುತ್ತದೆ. ಇದರಿಂದ ದುಬಾರಿ ಹಣ ತೆತ್ತು ಕೊಳ್ಳುವ ಬದಲಾಗಿ ಈಗ ಕೊಳ್ಳುವುದು ಸೂಕ್ತ ಎಂಬ ಲೆಕ್ಕಾಚಾರದಲ್ಲಿ ರೈತರು ಮೇವು ದೊರೆಯುವ ಮಲೆನಾಡು ಪ್ರದೇಶದಲ್ಲಿ ಸಂಚಾರ ಪ್ರಾರಂಭಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮ: ಬರದ ಪರಿಸ್ಥಿತಿ ನಿಭಾಯಿಸಲು ತಾಲೂಕು ಆಡಳಿತ ಈವರೆಗೂ ಸಜ್ಜಾಗಿಲ್ಲ. ಜನ ಜಾನುವಾರುಗಳಿಗೆ ಕುಡಿಯುವ ನೀರು, ರಾಸುಗಳಿಗೆ ಮೇವು, ಎನ್ಆರ್ಇಜಿ ಮೂಲಕ ಉದ್ಯೋಗಕ್ಕೆ ಮೊದಲ ಆದ್ಯತೆ ನೀಡಬೇಕು. ಆದರೆ, ಈ ಬಗ್ಗೆ ಇಲ್ಲಿಯವರೆಗೂ ಸಭೆ ಮಾಡಿಲ್ಲ. ಇದನ್ನರಿತು ಗ್ರಾಮೀಣ ಭಾಗದವರು ಸಹ ಮುಂದಿನ ದಿನಗಳಲ್ಲಿ ತೀವ್ರ ಸಂಕಷ್ಟ ಎದುರಾಗ ಬಾರದೆಂಬ ಚಿಂತನೆಯಲ್ಲಿ ಮುನ್ನೆ ಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದಾರೆ.
ಬೆಳೆ ನಾಶಕ್ಕೆ ಬಿಡಿಗಾಸು ದೊರೆಯಲಿಲ್ಲ: ಮುಂಗಾರು ಪ್ರಾರಂಭದಲ್ಲಿ ವರುಣ ಕೃಪೆ ತೋರಲಿಲ್ಲ. ಪೂರ್ವ ಮುಂಗಾರು, ಹಿಂಗಾರೂ ಸಹಃ ರೈತನ ಕೈ ಹಿಡಿಯಲಿಲ್ಲ, ಸರ್ಕಾರ ಬರಗಾಲ ಪಟ್ಟಿಗೆ ಚನ್ನರಾಯ ಪಟ್ಟಣ ತಾಲೂಕು ಹೆಸರು ಸೇರಿಸಿದ್ದರೂ ಇದು ವರೆಗೆ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ತಾಲೂ ಕು ಆಡಳಿತ ಸಭೆ ಮಾಡಿ ರೈತರ ಸಮಸ್ಯೆ ಕೇಳಿಲ್ಲ. ಹೈನುಗಾರಿಕೆ ಬದುಕು ರೂಪಿಸಲಿದೆ: ಕೃಷಿ ಕೈಕೊಟ್ಟಿದ್ದರಿಂದ ಬೀದಿಗೆ ಬಂದಿರುವ ರೈತ ತನ್ನ ಬದುಕನ್ನು ಹೈನುಗಾರಿಕೆ ಮೂಲಕ ಉತ್ತಮ ಪಡಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ಮಳೆನಂಬಿ ಕೃಷಿಯಲ್ಲಿ ಕೈ ಸುಟ್ಟುಕೊಂಡಾಗಿದೆ. ಮತ್ತೆ ಮೇವಿನ ಕೊರತೆಯಿಂದ ಹೈನುಗಾರಿಯಕೆಲ್ಲಿಯೂ ತೊಂದರೆ ಅನುಭವಿಸುವ ಬದಲಾಗಿ ಹೈನುಗಾರಿಕೆಯನ್ನು ಬೇಸಿಗೆಯಲ್ಲಿ ಯಾವ ರೀತಿ ನಿಭಾಯಿಸಬಹುದು ಎಂಬ ಲೆಕ್ಕಾಚಾರದಿಂದ ಮೇವು ಸಂಗ್ರಹಿಸಿಟ್ಟುಕೊಳ್ಳುವಲ್ಲಿ ನಿರತರಾಗಿದ್ದಾರೆ.
ಗಡಿಭಾಗದಲ್ಲಿ ಅಭಾವ: ತಾಲೂಕಿನ ಗಡಿಭಾಗದ ಹಲವು ಗ್ರಾಮದಲ್ಲಿ ಈಗಾಗಲೇ ಕುಡಿಯುವ ನೀರು ಹಾಗೂ ರಾಸುಗಳಿಗೆ ಮೇವಿನ ಅಭಾವ ತಲೆದೋರಿದೆ. ಹಿರೀಸಾವೆ, ದಂಡಿಗನಹಳ್ಳಿ ಮತ್ತು ನುಗ್ಗೇಹಳ್ಳಿ ಹೋಬಳಿಯಲ್ಲಿ ಸಂಪೂರ್ಣ ಮೇವಿನ ಅಭಾವವಿದೆ. ಶ್ರವಣಬೆಳಗೊಳ, ಬಾಗೂರು ಹಾಗೂ ಕಸಬಾ ಹೋಬಳಿಯಲ್ಲಿ ಕೆಲ ಭಾಗದಲ್ಲಿ ಹೇಮಾವತಿ ನಾಲೆ ಹರಿಯುತ್ತಿರುವುದರಿಂದ ಅಲ್ಲಿನ ರೈತರು ಮೆಕ್ಕೆಜೋಳ ಹಾಗೂ ರಾಸುಗಳ ಮೇವು ಬೆಳೆದಿರುವುದರಿಂದ ಅವರಿಗೆ ಅಷ್ಟಾಗಿ ಮೇವಿನ ತೊಂದರೆ ಸಮಸ್ಯೆ ಎದುರಾಗಿಲ್ಲ.
ದಿನಕ್ಕೆ ಬೇಕು ಸಾವಿರ ಟನ್ ಮೇವು: ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಪಶುಗಣತಿಯ ಪ್ರಕಾರ ತಾಲೂಕಿನಲ್ಲಿ 76,885 ಹಸುಗಳಿದ್ದು, 47,688 ಎಮ್ಮೆಗಳಿವೆ. ಇವುಗಳಿಗೆ ನಿತ್ಯ 6,22,865 ಕೆ.ಜಿ. ಮೇವು ಅಗತ್ಯವಿದೆ. ಕೊಳವೆಬಾವಿ ಹೊಂದಿರುವ ರೈತರು ಮಾತ್ರ ತಮ್ಮ ಕೃಷಿ ಭೂಮಿಯಲ್ಲಿ ಪಶುಗಳಿಗೆ ಅಗತ್ಯ ಮೇವು ಬೆಳೆದುಕೊಳ್ಳುತ್ತಿದ್ದಾರೆ. ಉಳಿದ ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ.
ಲೋಡ್ಗೆ 16ರಿಂದ 18 ಸಾವಿರ ರೂ. : ಟ್ರ್ಯಾಕ್ಟರ್ ಲೋಡು ರಾಗಿ ಹುಲ್ಲಿಗೆ 16 ರಿಂದ 18 ಸಾವಿರ ರೂ. ಇದೆ. ಬಾಡಿಗೆ ಸೇರಿ 21 ಸಾವಿರ ರೂ. ಪಾವತಿ ಮಾಡಬೇಕಿದೆ. ಇದರಿಂದ ಭತ್ತದ ಹುಲ್ಲಿನ ಮೊರೆ ಹೋಗಿದ್ದು, ಒಂದು ಲಾರಿ ಲೋಡ್ಗೆ 9 ರಿಂದ 12 ಸಾವಿರ ರೂ. ಇದ್ದು ಬಾಡಿಗೆ ಸೇರಿ 15 ಸಾವಿರ ರೂ. ಪಾವತಿ ಮಾಡಬೇಕಿದೆ. ಇದೇ ಪರಿಸ್ಥಿತಿ ಮುಂದುವರೆದರೆ 25 ಸಾವಿರ ರೂ. ಬೆಲೆ ಮೀರಬಹುದೆಂದು ರೈತರು ಸಂಗ್ರಹಿಸಿಟ್ಟುಕೊಟ್ಟಲು ಮುಂದಾಗಿದ್ದಾರೆ.
ತಾಲೂಕಿನಲ್ಲಿ ಸದ್ಯಕ್ಕೆ ಮೇವಿನ ಸಮಸ್ಯೆ ಇಲ್ಲ, ಮುಂದೆ ಸಾಕಷ್ಟು ತೊಂದರೆ ಆಗಲಿದೆ. ಬಾಗೂರು, ಹಿರೀಸಾವೆ ಹೋಬಳಿಯ ಗಡಿ ಭಾಗಗಳಲ್ಲಿ ಮೇವಿನ ಸಮಸ್ಯೆ ಸಲ್ಪ ಮಟ್ಟಿಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದ್ದು, ಮೇವಿನ ಸಮಸ್ಯೆ ನೀಗಿಸಲು ಮೇವಿನ ಕಿಟ್ಗೆ ಬೇಡಿಕೆ ಸಲ್ಲಿಸಲಾಗಿದೆ. –ಸೋಮಶೇಖರ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸಹಾಯಕ ನಿರ್ದೇಶಕ
ಈಗ ಮೇವು ಸಂಗ್ರಹ ಮಾಡದೇ ಹೋದರೆ ಮುಂದೆ ಮೇವಿಗೆ ಹೆಚ್ಚು ಹಣ ತೆತ್ತು ಕೊಳ್ಳಬೇಕಾಗುತ್ತದೆ. ಮೇವು ದೊರೆಯುವ ಪ್ರದೇಶಗಳಲ್ಲಿ ಸಂಚಾರ ಮಾಡಿ ಭತ್ತ ಅಥವಾ ರಾಗಿ ಹುಲ್ಲು ಕೊಳ್ಳಲು ಮುಂದಾಗುತ್ತಿದ್ದೇವೆ. ● ಕಾಂತರಾಜು, ನೆಟ್ಟಕೆರೆ, ತಾಲೂಕಿನ ಗಡಿ ಭಾಗದ ಗ್ರಾಮ
-ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ