13 ರಿಂದ ಹರ್ ಘರ್ ಮೇ ತಿರಂಗಾ ಅಭಿಯಾನ
Team Udayavani, Aug 9, 2022, 4:01 PM IST
ಹಾಸನ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯಲ್ಲಿ ಆ.13 ರಿಂದ 15 ರವರೆಗೆ ಮನೆ ಹಾಗೂ ಅಂಗಡಿ ಮುಂಗ್ಗಟ್ಟುಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಹರ್ ಘರ್ ಮೇ ತಿರಂಗಾ ಅಭಿಯಾನ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಸಬಾಂಗಣದಲ್ಲಿ ಸೋಮವಾರ ಹರ್ಘರ್ ಮೇ ತಿರಂಗಾ ಅಭಿಯನದ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ಮನೆ, ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣ ವಾಗಿ ಆಚರಿಸಬೇಕು ಎಂದು ಹೇಳಿದರು. ಕ್ವಿಟ್ ಇಂಡಿಯಾ ಚಳವಳಿ ನೆನಪಿಗಾಗಿ ಜಿಲ್ಲೆಯ ಮೂವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಸನ್ಮಾನಿಸಿ, ಗೌರವಿ ಸಬೇಕು ಎಂದು ಉವಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ಗೆ ಸೂಚಿಸಿದರು.
ಜಿಪಂ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಬಾವುಟ ಸಿದ್ಧಪಡಿಸಿ ಹಂಚಿಕೆ ಮಾಡಲಾಗುತ್ತಿದೆ. ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಒಂದು ಲಕ್ಷ ಬಾವುಟಗಳು ಪೂರೈಕೆಯಾಗಿವೆ. ಸ್ಥಳೀಯ ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ ಮೂಲಕ ಧ್ವಜ ಮಾರಾಟ ಮಾಡಲಾಗುವುದು. ಹರ್ಘರ್ ಮೇ ತಿರಂಗಾದ ಉದ್ದೇಶ ಹಾಗೂ 75ನೇ ಸ್ವಾತಂತ್ರ್ಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು ಡೀಸಿ ನಿರ್ದೇಶನ ನೀಡಿದರು. ನಗರ ಸಭೆ ಸಾರ್ವಜನಿಕರಿಗೆ ಬಾವುಟ ಖರೀದಿಸುವಂತೆ ಜಾಗೃತಿ ಮೂಡಿಸುವುದರ ಜೊತೆಗೆ ಬಾವುಟಗಳು ಎಲ್ಲಿ ಸಿಗುತ್ತವೆ ಎಂಬ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಉಪಭಾಗಾಧಿಕಾರಿ ಜಗದೀಶ್, ಜಿಪಂ ಮುಖ್ಯ ಯೋಜನಾಧಿಕಾರಿ ಪರಪ್ಪ ಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ಚಂದ್ರ, ನಗರ ಸಭೆ ಆಯುಕ್ತ ಪರಮೇಶ್ವರಪ್ಪ ಮತ್ತಿತರರು ಹಾಜರಿದ್ದರು.