ಮೇಕೆದಾಟು ಯೋಜನೆಗೆ ನ್ಯಾಯಾಧಿಕರಣದ ವಿರೋಧವಿಲ್ಲ: ಸಿಎಂ
Team Udayavani, Feb 19, 2017, 3:45 AM IST
ಹಾಸನ: ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕಾವೇರಿ ನ್ಯಾಯಾಧಿಕರಣದ ವಿರೋಧವಿಲ್ಲ. ಜಲಾಶಯ ನಿರ್ಮಾಣದಿಂದ ತಮಿಳುನಾಡಿಗೆ ಯಾವುದೇ ಬಾಧಕವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾವೇರಿ ಕಣಿವೆಯಲ್ಲಿ ಕೆಆರ್ಎಸ್ ಮತ್ತು ಕಬಿನಿ ಬಿಟ್ಟರೆ ಬಿಳಿಗುಂಡ್ಲುವರೆಗೆ ಯಾವುದೇ ಜಲಾಶಯ ಇಲ್ಲ. ಹಾಗಾಗಿ ಸಮತೋಲನ ಜಲಾಶಯವನ್ನು ನಿರ್ಮಾಣ ಮಾಡಬೇಕೆಂಬುದು ಕರ್ನಾಟಕದ ಬಹಳ ದಿನಗಳ ನಿರೀಕ್ಷೆಯಾಗಿತ್ತು. ಹಾಗಾಗಿ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ 5,900 ಕೋಟಿ ರೂ. ಅಂದಾಜಿನ ಯೋಜನೆ ರೂಪಿಸಲಾಗಿದೆ. ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗೆ ಮೇಕೆದಾಟು ಜಲಾಶಯ ನಿರ್ಮಾಣ ಮಾಡಲಾಗುತ್ತಿದ್ದು, ಕೇಂದ್ರ ಜಲಸಂಪನ್ಮೂಲ ಇಲಾಖೆ, ಇಂಧನ ಇಲಾಖೆಯ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಶುಕ್ರವಾರ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ರಾಜಕೀಯ ಕಾರಣಕ್ಕೆ ತಮಿಳುನಾಡು ವಿರೋಧ ಮಾಡುತ್ತಿದೆ. ಸಮತೋಲನ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ತಮಿಳುನಾಡಿಗೂ ಅನುಕೂಲವಾಗಲಿದೆ ಹಾಗಾಗಿ ತಮಿಳುನಾಡು ವಿರೋಧ ಮಾಡಕೂಡದು ಎಂದರು.