Cyber ಖದೀಮರಿಂದ ಜಾನಪದ ವಿವಿ ಕುಲಪತಿ ಡಾ.ಟಿ.ಎಂ.ಭಾಸ್ಕರ ಅವರಿಗೆ 60 ಸಾವಿರ ರೂ. ವಂಚನೆ
Team Udayavani, Aug 8, 2023, 8:55 PM IST
ಹಾವೇರಿ: ತಾಲೂಕಿನ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ.ಭಾಸ್ಕರ್ ಅವರಿಗೆ ಸೈಬರ್ ಖದೀಮರು 60 ಸಾವಿರ ರೂ. ವಂಚಿಸಿದ ಘಟನೆ ನಡೆದಿದೆ.
ಧಾರವಾಡ ಎಸ್ಬಿಐ ಬ್ಯಾಂಕ್ನ ನವೀಕುಮಾರ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮಂಗಳವಾರ ಮಧ್ಯಾಹ್ನದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಅವರಿಗೆ ಫೋನ್ ಮಾಡಿ, ನಿಮ್ಮ ಫೋನ್ ಪೇಗೆ ಒಂದು ದಿನದ ಟ್ರಾಂಜಾಕ್ಷನ್ ಲಿಮಿಟೇಶನ್ 60 ಸಾವಿರ ರೂ. ಇದ್ದು, ಇದನ್ನು ಮುಂದುವರಿಸಲು ನಾವು ನಿಮ್ಮ ಫೋನ್ಗೆ ಲಿಂಕ್ ಕಳುಹಿಸುತ್ತೇನೆ. ಅದಕ್ಕೆ ನೀವು ಎಸ್ ಎಂದು ತಿಳಿಸಿದರೆ ಈ ಸೇವೆ ಮುಂದುವರಿಯುತ್ತದೆ. ಅಲ್ಲದೆ ಈ ಸೇವೆಯನ್ನು ನಿಮ್ಮ ಸ್ನೇಹಿತರಾದ ಅನಸೂಯಾ ಕಾಂಬಳೆ, ಕೃಷ್ಣ ನಾಯಕ, ರಾಜೇಂದ್ರ ನಾಯಕ ಅವರಿಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.
ಇದು ಸತ್ಯ ಇರಬಹುದು ಎಂದುಕೊಂಡ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಅವರು ಸೇವೆ ಮುಂದುವರಿಸಲು ಅವರೊಂದಿಗೆ ಮಾತನಾಡಿ ತಮ್ಮ ಫೋನ್ ಪೇ ಪಾಸ್ವರ್ಡ್ ನೀಡಿದ್ದಾರೆ. ತಕ್ಷಣ 60 ಸಾವಿರ ರೂ. ಏಕಾಏಕಿ ಅವರ ಅಕೌಂಟ್ನಿಂದ ವರ್ಗಾವಣೆಯಾಗಿರುವ ಕುರಿತು ಎಸ್ಎಂಎಸ್ ಬಂದಿದೆ. ಆ ಮೇಲೆ ಫೋನ್ ಮಾಡಿದ ವ್ಯಕ್ತಿಗೆ ಅವರು ಮರಳಿ ಫೋನ್ ಮಾಡಿದಾಗ ಕಾಲ್ ಕಟ್ ಮಾಡಿದರು ಎಂದು ಕುಲಪತಿ ಡಾ. ಟಿ.ಎಂ. ಭಾಸ್ಕರ್ ಅವರು ದೂರಿದನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಶಿಗ್ಗಾವಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.