ಸರ್ಕಾರದ ತೀರ್ಮಾನಗಳನ್ನು ಒಪ್ಪಿ ಸಾರಿಗೆ ನೌಕರರು ಮುಷ್ಕರ ಕೈಬಿಡುವಂತೆ ಬಿ.ಸಿ.ಪಾಟೀಲ್ ಮನವಿ
Team Udayavani, Dec 13, 2020, 5:45 PM IST
ಹಾವೇರಿ: ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಕರ್ನಾಟಕ ಸರ್ಕಾರ ಸಾರಿಗೆ ನೌಕರರ ಹತ್ತು ಭರವಸೆಗಳಲ್ಲಿ ಒಂಭತ್ತು ಭರವಸೆಗಳನ್ನು ಈಡೇರಿಸುತ್ತಿರುವುದು ಐತಿಹಾಸಿಕ ತೀರ್ಮಾನವೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ,ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಯತ್ತಿದೆ. ಸರ್ಕಾರ ನೌಕರರ ಒಂಭತ್ತು ಬೇಡಿಕೆಗಳನ್ನು ಈಡೇರಿಸುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಸಂಬಂಧ ಬಿಎಂಟಿಸಿ ಸೇರಿದಂತೆ ಕರ್ನಾಟಕ ರಸ್ತೆ ಸಾರಿಗೆಯ ಎಲ್ಲಾ ನಿಗಮಗಳ ಮುಖಂಡರ ಜೊತೆಗೆ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಚರ್ಚಿಸಿ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಸರ್ಕಾರದ ಈ ತೀರ್ಮಾನಗಳನ್ನು ಒಪ್ಪಿ ಸಾರಿಗೆ ನೌಕರರು ತಮ್ಮ ಮುಷ್ಕರ ಕೈಬಿಡುವಂತೆ ಬಿ.ಸಿ.ಪಾಟೀಲ್ ಮನವಿ ಮಾಡದರು.
ಇದನ್ನೂ ಓದಿ : ರೈತರಿಗೆ ಬೆಂಬಲ ಸೂಚಿಸಿ ರಾಜಿನಾಮೆ ಸಲ್ಲಿಸಿದ ಪಂಜಾಬ್ ಡಿಐಜಿ
ಇತ್ತೀಚೆಗೆ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನಿಗಮ ಹಾಗೂ ನೌಕರರಿಗೆ ಬೆಂಬಲವಾಗಿರುತ್ತೇನೆ ಎಂದು ಹೇಳುವ ಮೂಲಕ ಸಾರಿಗೆ ನೌಕರರ ಒಗ್ಗಟ್ಟನ್ನು ಮುರಿದು ಅದನ್ನು ಎರಡು ತಂಡವನ್ನಾಗಿಸಿ ಹೋರಾಟ ಮಾಡುತ್ತಿರುವುದು ವಿಪರ್ಯಾಸ ಎಂದರು. ರೈತ ಪರ ಹೋರಾಟ ಮಾಡಿ ಕೋಡಿಹಳ್ಳಿ ಚಂದ್ರಶೇಖರ್ ಮನೆಮಠಗಳನ್ನು ಕಳೆದುಕೊಂಡು ಬಿಟ್ಟಿದ್ದಾರೆ. ಪಾಪ ಬೆಂಗಳೂರಿನಲ್ಲಿ ಗುಡಿಸಲಿನಲ್ಲಿ ವಾಸಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಬಿ.ಸಿ.ಪಾಟೀಲ್, ಕೋಡಿಹಳ್ಳಿ ಚಂದ್ರಶೇಖರ್ ಈ ರೀತಿ ಸಾರಿಗೆ ನಿಗಮ,ನೌಕರರ ಹೋರಾಟಕ್ಕೂ ಕೈಹಾಕಿ ಮಧ್ಯಪ್ರವೇಶಿಸಿ ಸಾರಿಗೆ ನಿಗಮ ನೌಕರರನ್ನು ಸಹ ಹಾಳುಮಾಡಬಾರದು ಎಂದು ಸೂಚ್ಯವಾಗಿ ಹೇಳಿದರು.