ಮಾದಕ ವಸ್ತು ಜಾಗೃತಿ ಜಾಥಾ
Team Udayavani, Jul 1, 2020, 5:19 PM IST
ಹಾವೇರಿ: ಮಾದಕ ವಸ್ತು ಮತ್ತು ಮಾನವ ಸಾಗಣಿಕೆ ಕುರಿತಂತೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಆಯೋಜಿಸಲಾದ ಬೈಕ್ ರ್ಯಾಲಿಗೆ ಎಸ್ಪಿ ಕೆ.ಜಿ ದೇವರಾಜು ಚಾಲನೆ ನೀಡಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿ, ಸಮಾಜಕ್ಕೆ ಮಾರಕವಾದ ಮಾದಕ ವಸ್ತು ಮತ್ತು ಮಾನವ ಸಾಗಾಣಿಕೆ ಕುರಿತಂತೆ ಜಾಗೃತಿ ಮೂಡಿಸಿ ಸಮಾಜದಲ್ಲಿ ಅರಿವು ಮೂಡಿಸಲು ಪೊಲೀಸ್ ಇಲಾಖೆಯೊಂದಿಗೆ ಎಲ್ಲರು ಕೈಜೋಡಿಸಬೇಕು ಎಂದರು.
ಕೋವಿಡ್ ವೈರಸ್ ಅತ್ಯಂತ ಅಪಾಯಕಾರಿಯಾಗಿ ಹರಡುತ್ತಿದೆ ಮುಂಜಾಗ್ರತಾ ಕ್ರಮಗಳಿಂದ ಮಾತ್ರ ಈ ವೈರಸ್ ನಿಯಂತ್ರಿಸಬಹುದು. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು. ಇಷ್ಟಾಗಿಯೂ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸಿ ಸಾರ್ವಜನಿಕವಾಗಿ ಓಡಾಟ ನಡೆಸುವರಿಗೆ ಇಂದಿನಿಂದಲೇ ದಂಡ ವಿಧಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ದಿಲೀಷ್ ಶಶಿ, ಡಿವೈಎಸ್ಪಿ ವಿಜಯಕುಮಾರ ಸಂತೋಷ, ತಹಶೀಲ್ದಾರ್ ಶಂಕರ ಜಿ.ಎಸ್., ಬಿಇಒ ಎಂ.ಎಚ್. ಪಾಟೀಲ್ ಹಾಗೂ ವಿವಿಧ ಪೊಲೀಸ್ ಹಾಗೂ ಶಿಕ್ಷಾಣಾಧಿಕಾರಿಗಳು ಇದ್ದರು.