ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್
•ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ•ಹಿಂದೂ-ಮುಸ್ಲಿಂ ಬಾಂಧವರಿಂದ ಪರಸ್ಪರ ಶುಭಾಶಯ ವಿನಿಮಯ
Team Udayavani, Jun 6, 2019, 10:02 AM IST
ಸವಣೂರು: ಸ್ಥಳೀಯ ಆಸಾರ ಮೈದಾನದಲ್ಲಿ ಬುಧವಾರ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸವಣೂರು: ಇಲ್ಲಿನ ಈದ್ಗಾ, ಆಸಾರ-ಏ-ಷರೀಫ್ ಮೈದಾನ ಸೇರಿದಂತೆ ತಾಲೂಕಿನ ವಿವಿಧೆಡೆ ಪ್ರತ್ಯೇಕವಾಗಿ ಈದ್-ಉಲ್-ಫಿತರ್(ರಂಜಾನ್) ಹಬ್ಬದ ನಿಮಿತ್ತ ಮುಸಲ್ಮಾನರಿಂದ ಬುಧವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬೆಳಗ್ಗೆ ಅಬಾಲವೃದ್ಧರಾದಿಯಾಗಿ ಹೊಸ ಉಡುಗೆ ಧರಿಸಿ ಸಹಸ್ರಾರು ಸಂಖ್ಯೆಯಲ್ಲಿ ನಗರದ ಹೊರವಲಯದಲ್ಲಿರುವ ಈದ್ಗಾ ಹಾಗೂ ಆಸಾರ-ಏ-ಷರೀಫ್ ಮೈದಾನಗಳಿಗೆ ತೆರಳಿದ ಮುಸ್ಲಿಂರು ನಮಾಜ್ ಮಾಡುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ, ಬಾಂಧವರೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಧಾರ್ಮಿಕ ರೀತಿ ರಿವಾಜಿನಂತೆ ಬಡವರಿಗೆ ದಾನ, ಧರ್ಮ ಮಾಡಿ ಅಲ್ಲಾಹುವಿನ ಕೃಪೆಗೆ ಪಾತ್ರರಾದ ನೆಮ್ಮದಿ ಅನುಭವಿಸಿದರು.
ಆಸಾರ-ಏ-ಷರೀಫ್ ಮೈದಾನದಲ್ಲಿ ಅಲಾಜ್ ಶಮಶುಲ್ಲಾ ಹಕ್ ಸಾಹೇಬ್ ಹಾಗೂ ಮೌಲಾನಾ ಮುಸ್ತಾಕಅಹ್ಮದ್ಖಾಜಿ ನೇತೃತ್ವದಲ್ಲಿ ಹಾಗೂ ಈದ್ಗಾದಲ್ಲಿ ಧರ್ಮಗುರುಗಳಾದ ಮೌಲಾನ ಅಲಾಜ್ ಮಂಜೂರ್ ಆಲಂ ರಜ್ವಿ ಹಾಗೂ ಜಾಫರ್ ಜವಳಿ ಹಫೀಜ್ ಅವರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಜೀಶಾನಖಾನ ಪಠಾಣ ಅವರು ಧರ್ಮಗುರುಗಳಾದ ಮೌಲಾನ ಅಲಾØಜ್ ಮಂಜೂರ್ ಆಲಂ ರಜ್ವಿ ಅವರನ್ನು ಸನ್ಮಾನಿಸುವ ಮೂಲಕ ಪರಸ್ಪರ ರಂಜಾನ್ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆ ನಂತರ ದೇವರಿಗೆ ನೈವೇದ್ಯ ಅರ್ಪಿಸಿದ ಮುಸಲ್ಮಾನರು, ಹಿಂದೂ ಬಾಂಧವರೊಂದಿಗೆ ಹಬ್ಬದ ಶುಭಾಶಯ ಹಂಚಿಕೊಳ್ಳುವ ದೃಶ್ಯ ಕಂಡುಬರುತ್ತಿತ್ತು. ಹಬ್ಬದ ನಿಮಿತ್ತ ಮನೆಗಳಲ್ಲಿ ವಿವಿಧ ತರದ ಭಕ್ಷ ್ಯಗಳನ್ನು ತಯಾರಿಸಿ ಕುಟುಂಬ ಸದಸ್ಯರೊಂದಿಗೆ ಭೋಜನ ಸವಿಯುವ ಮೂಲಕ ಉಪವಾಸ ಅಂತ್ಯಗೊಳಿಸಿದರು.
ಆಸಾರ-ಏ-ಷರೀಫ್ ಮೈದಾನದಲ್ಲಿ ಪುರಸಭೆ ಸದಸ್ಯರಾದ ಅದ್ದು ಫರಾಶ, ಅಂಜುಮನ್ ಸಮಿತಿ ಉಪಾಧ್ಯಕ್ಷ ಮಹ್ಮದ್ ಇಸೂಫ್ ಪರಾಶ, ಬಾಬಾಹುಸೇನ ಜಾಹಾಂಗೀರ, ಬಾಷಾ ದೊಡ್ಡಮನಿ, ಯಾಸಿರ ಸಾಗರ, ಮುಸ್ತಾಕ ಬಿರಾದಾರ, ಮುಖಂಡರಾದ ಆರ್.ಎಂ.ಡಂಬಳ, ಅಲ್ತಾಫ್ ದುಕಾನದಾರ, ಬಾಹುದ್ದೀನ ಇನಾಮದಾರ, ಸರ್ಪರಾಜ್ ಪಠಾಣ, ಸೇರಿದಂತೆ ಸಹಸ್ರಾರು ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಈದ್ಗಾ ಮೈದಾನದಲ್ಲಿ ಅಂಜುಮನ್ ಅಧ್ಯಕ್ಷ ಜೀಶಾನಖಾನ ಪಠಾಣ, ಉಪಾಧ್ಯಕ್ಷ ಇಸಾಕಅಹ್ಮದಖಾನ ಪಠಾಣ, ಕಾಯದರ್ಶಿ ಸಲಿಂ ಬನ್ನೂರ, ಸದಸ್ಯರಾದ ಅಮಜದ ಪಠಾಣ, ವಾಹೀದ ಫರಾಶ, ಮುಖಂಡರಾದ ಎಜೆ ಪಠಾಣ, ಅಲ್ಲಾವುದ್ದೀನ ಮನಿಯಾರ, ಜಾಕೀರ್ ಫರಾಶ, ಎ.ಜೆ.ಕಿಲ್ಲೇದಾರ, ನನ್ನೇಮಿಯ್ನಾ ಕಿಸ್ಮತಗಾರ, ರಾಜ್ ಪಠಾಣ, ಅಲ್ಲಾವುದ್ದೀನ ಚೋಪದಾರ ಸೇರಿದಂತೆ ಸಮಾಜ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.