ಸೋಲಿನ ಭೀತಿಯಿಂದ ಐಟಿ ದಾಳಿ: ಕೋಳಿವಾಡ
Team Udayavani, Dec 4, 2019, 8:48 PM IST
ಹಾವೇರಿ:ಸೋಲುವ ಭೀತಿ ಹಾಗೂ ಹತಾಶ ಭಾವನೆಯಿಂದ ಬಿಜೆಪಿಯವರು ನನ್ನ ಮನೆ ಮೇಲೆ ಆದಾಯ ತೆರಿಗೆ ಹಾಗೂ ಅಬಕಾರಿ ದಾಳಿ ನಡೆಸಿದ್ದಾರೆ ಎಂದು ರಾಣಿಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಆರೋಪಿಸಿದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಬಕಾರಿ ಹಾಗೂ ಆದಾಯ ತೆರಿಗೆ ಅಧಿ ಕಾರಿಗಳು ನನ್ನ ಮನೆ ಮೇಲೆ ದಾಳಿ ಮಾಡಿ ಏನೂ ಸಿಗದೆ ವಾಪಸ್ ಹೋಗಿದ್ದಾರೆ. ಬಿಜೆಪಿ ಸೋಲಿನ ಹತಾಶ ಭಾವನೆಯಿಂದ ಹೀಗೆಲ್ಲ ಮಾಡುತ್ತಿದ್ದು ಇದಕ್ಕೆ ನಾನು ಜಗ್ಗಲ್ಲ; ಬಗ್ಗಲ್ಲ. ನನ್ನ ಹಿಂದೆ ಜನ ಇದ್ದಾರೆ. ಬಿಜೆಪಿ ಸರ್ಕಾರದ ಮಂತ್ರಿಗಳೆಲ್ಲ ಕೂಡಿ ದಾಳಿ ಮಾಡಿಸಿದ್ದಾರೆ. ನನ್ನ ಮೇಲೆ ಆಪಾದನೆ ಹೊರೆಸಿ, ಸೋಲಿಸಲು ಯತ್ನಿಸಿದ್ದಾರೆ. ನನ್ನ ಮನೆ ಮುಂದೆ ಸಿಸಿ ಕ್ಯಾಮೆರಾ ಸಹ ಹಾಕಿದ್ದಾರೆ. ಎಲ್ಲಿವರೆಗೆ ನನ್ನ ಹಿಂದೆ ಜನಬೆಂಬಲ ಇದೆಯೋ ಅಲ್ಲಿವರೆಗೆ ಯಾರಿಗೂ ಏನೂ ಮಾಡಲು ಆಗಲ್ಲ ಎಂದರು.
ಬಿಜೆಪಿ ದ್ವೇಷ ರಾಜಕೀಯ ಅತಿರೇಕಕ್ಕೇರಿದೆ. ಇಡಿ, ಐಟಿಯಂಥ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ಕಿಸೆಯಲ್ಲಿಟ್ಟುಕೊಂಡವರಂತೆ ದುರುಪಯೋಗ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಈ ರೀತಿ ದಾಳಿ ನಡೆಸುವ ಕೆಲಸ ಮಾಡುತ್ತಿದೆ. ಈ ಕೆಲಸ ಮಾಡಿಸುವ ಮೂಲಕ ಚಿದಂಬರಂ, ಡಿಕೆಶಿ ಅವರನ್ನು ಬಂಧನದಲ್ಲಿರುವಂತೆ ಮಾಡಿದ ಬಿಜೆಪಿ, ಈಗ ನನ್ನ ಮನೆಗೆ ಮೇಲೆ ದಾಳಿ ನಡೆಯುವಂತೆ ಮಾಡಿದೆ. ಕ್ಷೇತ್ರದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿಯವರು ನನ್ನ ಮನೆ ಮೇಲೆ ದಾಳಿಸಿದ್ದರಿಂದ ನನಗೆ ಒಳ್ಳೆಯದೇ ಆಗಿದೆ. ಗೆಲ್ಲುವ ಮತಗಳ ಅಂತರ ಹೆಚ್ಚಾಗಿದೆ. 20-30 ಸಾವಿರ ಮತಗಳೂ ಹೆಚ್ಚಾಗಿವೆ. ಅತ್ಯಧಿ ಕ ಮತಗಳ ಅಂತರದಿಂದ ಜನ ಗೆಲ್ಲಿಸುತ್ತಾರೆ ಎಂದರು.