ಕಾರು ಅಪಘಾತವಲ್ಲ ಕೊಲೆ!
Team Udayavani, May 4, 2019, 3:13 PM IST
ಹಾವೇರಿ: ರಾಣಿಬೆನ್ನೂರು ತಾಲೂಕಿನ ತೇರದಹಳ್ಳಿ ಕ್ರಾಸ್ ಬಳಿ ಏ.25 ರಂದು ಮರಕ್ಕೆ ಡಿಕ್ಕಿ ಹೊಡೆದು ಕಾರು ಭಸ್ಮವಾಗಿ, ವ್ಯಕ್ತಿಯೊಬ್ಬ ಜೀವಂತ ಮೃತಪಟ್ಟ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಇದೊಂದು ಪೂರ್ವನಿಯೋಜಿತ ಕೊಲೆ ಎಂಬುದು ತನಿಖೆಯಿಂದ ಬಯಲಾಗಿದೆ.
ವೀರೇಶ ಗುರುಶಾಂತಪ್ಪ ಎಂಬ ಹಮಾಲಿ ಕಾರ್ಮಿಕ ಮೃತಪಟ್ಟಿದ್ದನು. ದಾವಣಗೆರೆಯ ಎಪಿಎಂಸಿ ಯಾರ್ಡ್ನಲ್ಲಿ ಹಲಗೇರಿ ಗುರಣ್ಣ ಮತ್ತು ಸನ್ಸ್ ಹೆಸರಿನ ಈರುಳ್ಳಿ ದಲ್ಲಾಳಿ ಅಂಗಡಿಯನ್ನು ಜ್ಯೋತಿಬಣ್ಣದ ಸಹೋದರರು ಹೊಂದಿದ್ದಾರೆ. ಅವರ ಅಂಗಡಿಯಲ್ಲಿ ವೀರೇಶ ಹಮಾಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆ ಆರೋಪಿತ ಸಹೋದರರಿಂದ ಸಾಲ ಪಡೆದು ವಾಪಸ್ ಕೊಡದೇ ಕೆಲಸಕ್ಕೂ ಬಾರದೇ ಸತಾಯಿಸುತ್ತಿದ್ದ.
ಈ ಬಗ್ಗೆ ಕೇಳಿದಾಗ ವೀರೇಶ ಅವಾಚ್ಯವಾಗಿ ಬೈದಿದ್ದರಿಂದ ಸಿಟ್ಟಿಗೆದ್ದ ಮೃತ್ಯುಂಜಯ ಗುದ್ದಿ ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕಲು ಸಹೋದರನ ಸಹಾಯದಿಂದ ಶವವನ್ನು ಕಾರಿನಲ್ಲಿ ಹಾಕಿಕೊಂಡು ಬಂದು ತೇರದಹಳ್ಳಿ ಕ್ರಾಸ್ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಬೆಂಕಿ ಹತ್ತಿರುವಂತೆ ಸೃಷ್ಟಿಸಿ, ಸಾಕ್ಷ್ಯ ನಾಶಕ್ಕೆ ತಿನ್ನರ್ನ್ನು ಶವ ಹಾಗೂ ಕಾರಿನಲ್ಲಿ ಸುರುವಿ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಪ್ರಕರಣವನ್ನು ರಾಣಿಬೆನ್ನೂರು ಡಿಎಸ್ಪಿ ಟಿ.ವಿ.ಸುರೇಶ ತನಿಖೆ ಕೈಗೊಂಡು ಆರೋಪಿಗಳಾದ ಹಲಗೇರಿಯ ಮೃತ್ಯುಂಜಯ ಜ್ಯೋತಿಬಣ್ಣದ ಹಾಗೂ ಬಸವೇಶ ಜ್ಯೋತಿಬಣ್ಣದ ಎಂಬುವರನ್ನು ದಾವಣಗೆರೆಯ ಶಿವಕುಮಾರ ಬಡಾವಣೆಯಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ಕೆ.ಪರಶುರಾಮ ತಿಳಿಸಿದ್ದಾರೆ.