Lok Sabha Elections; ಹಾವೇರಿ ಕಾಂಗ್ರೆಸ್ನಲ್ಲೂ ಭುಗಿಲೆದ್ದ ಆಕ್ರೋಶ
Team Udayavani, Mar 20, 2024, 11:22 PM IST
ಹಾವೇರಿ: ಚುನಾವಣೆ ಹೊತ್ತಿನಲ್ಲಿ ದುಡಿಯಲು ಕಾರ್ಯಕರ್ತರು ಬೇಕು. ಗೆದ್ದ ಬಳಿಕ ಕಾರ್ಯಕರ್ತರ ಕಷ್ಟ, ಕಾರ್ಪಣ್ಯ ಕೇಳಲ್ಲ, ಫೋನ್ ಮಾಡಿದ್ರೂ ಸ್ವೀಕರಿಸುವುದಿಲ್ಲ ಎಂದು ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ವಿರುದ್ಧ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲ್ಲಿ ನಡೆಯಿತು.
ಸ್ಥಳೀಯ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಜಿಲ್ಲೆಯ ಶಾಸಕರು, ಪ್ರಮುಖರು ಕಾರ್ಯಕ್ರಮ ಉದ್ಘಾಟಿಸುತ್ತಿದ್ದಂತೆ ಗಲಾಟೆ ಜೋರಾಯಿತು. ಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದು ಕೆಲಕಾಲ ಪಕ್ಷದ ಮುಖಂಡರಿಗೂ ತಿಳಿಯದಂತಾಯಿತು.
ಚುನಾವಣೆ ಬಂದಾಗ ಮಾತ್ರ ಕಾರ್ಯಕರ್ತರು ನೆನಪಾಗುತ್ತಾರೆ. ಗೆದ್ದ ಮೇಲೆ ನಮ್ಮತ್ತ ನೋಡುವುದಿಲ್ಲ ಎಂದು ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಬಸವರಾಜ ಶಿವಣ್ಣನವರ ಸಮಾಧಾನ ಮಾಡಲು ಯತ್ನಿಸಿದರೂ ಕಾರ್ಯಕರ್ತರು ವೇದಿಕೆ ಏರಿದರು. ಆಗ ಎರಡು ಗುಂಪುಗಳ ನಡುವೆ ಗಲಾಟೆ ಮತ್ತಷ್ಟು ಜೋರಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಆಗ ಗಲಾಟೆಯ ದೃಶ್ಯ ಸೆರೆ ಹಿಡಿಯದಂತೆ ಮಾಧ್ಯಮದವರೊಂದಿಗೆ ಮತ್ತೊಂದು ಗುಂಪು ವಾಗ್ವಾದಕ್ಕಿಳಿಯಿತು. ಹೀಗಾಗಿ ಸಭೆ ಆರಂಭದಲ್ಲೇ ಗೊಂದಲದ ಗೂಡಾಯಿತು. ಸ್ವತಃ ಸಚಿವ ಎಚ್.ಕೆ. ಪಾಟೀಲ ಮಧ್ಯಪ್ರವೇಶಿಸಿದ ಬಳಿಕ ಗಲಾಟೆ ನಿಧಾನವಾಗಿ ಶಮನಗೊಂಡು ಸಭೆ ಮುಂದುವರಿಯಿತು.