ಮಹಾಘಟಬಂಧನ್ ಅನಾಥ ಮಗು
Team Udayavani, Apr 20, 2019, 4:39 PM IST
ಬ್ಯಾಡಗಿ: ತಂದೆ ಇಲ್ಲದ ಅನಾಥ ಮಗುವಿನಂತಾಗಿರುವ ಮಹಾಘಟಬಂಧನ್ಗೆ ನಾಯಕ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಸಚಿವ ಸ್ಥಾನ ಆಕಾಂಕ್ಷಿಗಳಿಗಿಂತ ಪ್ರಧಾನಿ ಹುದ್ದೆ ರೇಸ್ನಲ್ಲಿ 20ಕ್ಕೂ ಹೆಚ್ಚು ನಾಯಕರಿದ್ದಾರೆ.ಹೀಗಿರುವಾಗ ಅತಂತ್ರ ಸರ್ಕಾರದಿಂದ ಜನರ ಆಶೋತ್ತರಗಳು ಈಡೇರಲು ಸಾಧ್ಯವೇ? ದೇಶದ ಬಡ ಜನರಿಗೆ ಸುಭದ್ರ ಸರ್ಕಾರ ನೀಡಲು ಹೇಗೆ ಸಾಧ್ಯ ಎಂದು ಬಿಜೆಪಿ ಸ್ಟಾರ್ ಪ್ರಚಾರಕಿ ನಟಿ ಶೃತಿ ಪ್ರಶ್ನಿಸಿದರು.
ಮೋಟೆಬೆನ್ನೂರಿನಲ್ಲಿ ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಪ್ರಚಾರ ಭಾಷಣ ನಡೆಸಿದ ಅವರು, ಬಿಜೆಪಿಯವರು ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ ಎಂದು ಹೇಳುವ ಕಾಂಗ್ರೆಸ್ ನಾಯಕರು ಸಹ ಮಾಜಿ ಪ್ರಧಾನಿ ಮನಮೋಹನಸಿಂಗ್ ಹೆಸರಿನಲ್ಲಿ ಮತ ಕೇಳಲಿ. ಬಲಿಷ್ಠ ಹಾಗೂ ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರ ಹೆಸರು ಹೇಳಿಯೇ ನಾವು ಮತ ಕೇಳುತ್ತೇವೆ ಎಂದು ತಿರುಗೇಟು ನೀಡಿದರು.
ಗರೀಬಿ ಹಠಾವೋ ಎಂಬ ಘೋಷವಾಕ್ಯದೊಂದಿಗೆ ದಿ| ಇಂದಿರಾ ಗಾಂಧಿ ಫೋಟೊ ತೋರಿಸಿ ವೋಟ್ ಹಾಕಿಸಿಕೊಂಡ ಕಾಂಗ್ರೆಸ್ 60 ವರ್ಷಗಳ ಕಾಲ ಆಡಳಿತ ನಡೆಸಿದರೂ ದೇಶದ ಜನರ ಬಡತನ ಮಾತ್ರ ನಿವಾರಣೆ ಮಾಡಲಿಲ್ಲ. ಪುಕ್ಕಟೆ ಯೋಜನೆಗಳಿಗೆ ಕೈ ಒಡ್ಡುವುದನ್ನು ಮತದಾರರು ಮೊದಲು ಬಿಡಬೇಕು. ದೇಶ ಸಂದಿಗ್ಧ ಸ್ಥಿತಿ ತಲುಪಲು ಕಾರಣವಾದವರನ್ನು ಅಧಿಕಾರದಿಂದ ದೂರವಿಡುವಂತಾಗಬೇಕು. ವಿರೋಧಿ ರಾಷ್ಟ್ರಗಳು ಯಾವ ಸಂದರ್ಭದಲ್ಲಾದರೂ ಭಾರತದ ಮೇಲೆ ಯುದ್ಧಕ್ಕೆ ಬರಬಹುದು. ಅದನ್ನು ಎದುರಿಸಿ ತಕ್ಕ ಉತ್ತರ ಕೊಡುವಂಥ ಸಮರ್ಥ ನಾಯಕತ್ವ ಇರುವುದು ಪ್ರಧಾನಿ ಮೋದಿ ಅವರಿಗೆ ಮಾತ್ರ. ಹೀಗಾಗಿ ಮತ್ತೂಮ್ಮೆ ಮೋದಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಯುವರಾಜನ ಮಾತು ಕೇಳಿದರಂತೂ, ಇದಕ್ಕಿಂತ ದೊಡ್ಡ ಅಪಹಾಸ್ಯ ಬೇರೊಂದಿಲ್ಲ. ಆಲೂಗಡ್ಡೆ ಬಿತ್ತನೆ ಮಾಡಿ ಬಂಗಾರ ಬೆಳೆಯುವುದಾಗಿ ಹೇಳುವ ರಾಹುಲ್ ಗಾಂಧಿ ಅವರಿಗೆ ಸಾಮಾನ್ಯ ಜನರ ಸಂಕಷ್ಟ ಅರ್ಥವಾಗಲಿದೆಯೇ? ಕೇವಲ ಗಾಂಧಿ ಪರಿವಾರ ಎಂದಾಕ್ಷಣ ಅವರನ್ನು ಭವಿಷ್ಯದ ಪ್ರಧಾನಿ ಎಂಬುದಾಗಿ ಬಿಂಬಿಸಲಾಗುತ್ತಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ದೇಶದ ಅತ್ಯುನ್ನತ ಹುದ್ದೆಗೆ ಏರಿಸಿದಂಥ ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ. ಈ ಹಿಂದೆ ಚಾಯ್ವಾಲ್ನನ್ನು ಪ್ರಧಾನಿಯನ್ನಾಗಿ ಮಾಡಿದ ತಾವು ಇದೀಗ ಚೌಕಿದಾರನನ್ನು ಪ್ರಧಾನಿಯನ್ನಾಗಿ ಮಾಡಲು ಶಿವಕುಮಾರ ಉದಾಸಿ ಅವರನ್ನು ಬೆಂಬಲಿಸುವಂತೆ ಆಗ್ರಹಿಸಿದರು.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕ ನೆಹರು ಓಲೇಕಾರ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಭೋಜರಾಜ ಕರೂದಿ, ಶಂಕ್ರಣ್ಣ ಮಾತನವರ, ವೀರೇಂದ್ರ ಶೆಟ್ಟರ, ಸಿ.ಆರ್.ಬಳ್ಳಾರಿ, ಅನುಸೂಯಾ ಕುಳೇನೂರ, ಸಿದ್ಧರಾಜ ಕಲಕೋಟಿ, ಶೋಭಾ ನಿಸ್ಸೀಮಗೌಡ್ರ, ವಿ.ವಿ. ಹಿರೇಮಠ, ನಾಗರಾಜ ಬಳ್ಳಾರಿ, ವನಿತ ಗುತ್ತಲ, ಮುರಿಗೆಪ್ಪ ಶೆಟ್ಟರ, ವೈ.ಎನ್. ಕರೇಗೌಡ್ರ, ವಿಜಯ ಬಳ್ಳಾರಿ, ಚಂದ್ರಶೇಖರ ಆನ್ವೇರಿ, ಲಲಿತಾ ಬ್ಯಾಟಪ್ಪನವರ, ಸುರೇಶ ಅಸಾದಿ, ನಾಗರಾಜ ಹಾವನೂರ, ವಿದ್ಯಾಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.