ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಸಚಿವ ಆರ್.ಅಶೋಕ
Team Udayavani, Dec 18, 2022, 10:55 AM IST
ಹಾವೇರಿ: ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದ ದಲಿತರ ಮನೆಯಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರು ರವಿವಾರ ಬೆಳಗ್ಗೆ ಉಪಹಾರ ಸೇವಿಸಿದರು.
ಗ್ರಾಮದ ಫಕ್ಕೀರಪ್ಪ ಹರಿಜನ ಅವರ ಮನೆಯಲ್ಲಿ ಸಚಿವರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಹರಿಜನ ಅವರ ಮನೆಗೆ ಸಚಿವರು ಆಗಮಿಸುತ್ತಿದ್ದಂತೆ ಅವರ ಕೈಗೆ ಕಂಕಣ ಕಟ್ಟಿ, ಹಣೆಗೆ ತಿಲಕವಿಟ್ಟು ಆರತಿ ಬೆಳಗಿ ಮನೆಗೆ ಸ್ವಾಗತಿಸಿದರು. ಈ ವೇಳೆ ಸಚಿವರು ಆರತಿ ತಟ್ಟೆಗೆ 2 ಸಾವಿರ ರೂ.ಗಳನ್ನು ಹಾಕಿದರು.
ಸಚಿವರು ಬಿಸಿ ರೊಟ್ಟಿ, ಹೆಸರುಕಾಳು ಪಲ್ಯ, ಮಡಿಕೆಕಾಳು ಪಲ್ಯ, ಕೆಂಪು ಚಟ್ನಿ, ಅಗಸಿ ಹಿಂಡಿ, ಶೇಂಗಾ ಚಟ್ನಿ, ಮೂಲಂಗಿ ಪಚಡಿ, ಗುರಳ್ಳ ಚಟ್ನಿ, ಗಜ್ಜರಿ, ಸೌತೆಕಾಯಿ ಪಚಡಿ, ಉಪ್ಪಿಟ್ಟು, ಮಂಡಕ್ಕಿ, ಟೀ ಸೇವಿಸಿದರು.
ಇದಕ್ಕೂ ಮೊದಲು ಸಚಿವರು ವಾಸ್ತವ್ಯ ಮಾಡಿದ್ದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಆವರಣದಲ್ಲಿ ಬೆಳಗ್ಗೆ ದಿನಪತ್ರಿಕೆಗಳನ್ನು ಓದಿದರು. ನಂತರ ವಿದ್ಯಾರ್ಥಿಗಳೊಂದಿಗೆ ವ್ಯಾಯಾಮ ಮಾಡಿದರು. ಬಳಿಕ ಗ್ರಾಮ ವಾಸ್ತವ್ಯದ ಸವಿನೆನಪಿಗಾಗಿ ವಸತಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಟ್ಟರು.
ಬಳಿಕ ವಸತಿ ಅನ್ನಪೂರ್ಣೇಶ್ವರಿ ಭೋಜನಾಲಯದಲ್ಲಿ ಮಕ್ಕಳಿಗೆ ಸಚಿವರು ಉಪಹಾರ ಬಡಿಸಿದರು.
ಸಚಿವರಾದ ಆರ್ ಅಶೋಕ ಅವರು ಬಾಡ ಗ್ರಾಮದ ಅಂಬೇಡ್ಕರ್ ಕಾಲೋನಿಯ ಪಕೀರಪ್ಪ ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.
ಸಕಾಲದಲ್ಲಿ ಪೌತಿ ಖಾತೆ ದಾಖಲೆ ವಿತರಣೆ: ಸಚಿವ ಆರ್. ಅಶೋಕ್
ಹಾವೇರಿ: ಪೌತಿ ಖಾತೆ ವಿಳಂಬಕ್ಕೆ ಅವಕಾಶ ಮಾಡಿಕೊಡದೆ ಸಕಾಲದಲ್ಲಿ ದಾಖಲೆಗಳನ್ನು ನೀಡಲು ನಿಯಮಗಳನ್ನು ರೂಪಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪೌತಿ ಖಾತೆ ಆಂದೋಲನ ನಡೆಸಿದ ಸಚಿವರು, ರೈತರಿಗೆ ಆರ್ಟಿಸಿ ವಿತರಣೆ ಮಾಡಿ ಮಾತನಾಡಿದರು.
ಪೌತಿಖಾತೆ ಸಹಿತ ರೈತರು ಕಂದಾಯ ದಾಖಲೆಗಳನ್ನು ಪಡೆಯುವಾಗ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿತ್ತು. ಈಗ ಎಲ್ಲದಕ್ಕೂ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. ಕಾಲಮಿತಿಯೊಳಗೆ ರೈತರಿಗೆ ಅಗತ್ಯ ದಾಖಲೆಗಳು ಲಭ್ಯವಾಗುವಂತೆ ಮಾಡಲಾಗಿದೆ. ಈ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.