ಅಂತ್ಯಸಂಸ್ಕಾರ ಪೂಜೆ ವೇಳೆ ಕಣ್ತೆರೆದ ಮಹಿಳೆ!
Team Udayavani, Nov 23, 2017, 6:25 AM IST
ರಾಣಿಬೆನ್ನೂರ: ಮೃತಪಟ್ಟಿದ್ದಾಳೆಂದು ಕುಟುಂಬಸ್ಥರು ಅದಾಗಲೇ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು, ಇನ್ನೇನು ಪೂಜೆ ನಡೆಸಿ ಅಂತಿಮ ಕಾರ್ಯ ನೆರವೇರಿಸುವಷ್ಟರಲ್ಲಿ ಮಹಿಳೆ ಕಣ್ತೆರೆದು ಎಲ್ಲರಲ್ಲೂ ದಿಗ್ಭ್ರಮೆ ಮೂಡಿಸಿದ್ದಳು. ಆದರೆ, ವಿಧಿಯಾಟ ಬೇರೆಯಾಗಿತ್ತು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪುನಃ ಮಹಿಳೆ ಮೃತಪಟ್ಟಿದ್ದಾಳೆ.
ಆಶ್ಚರ್ಯವಾದರೂ ನಿಜ. ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಇಂಥದೊಂದು ಘಟನೆ ಬುಧವಾರ ನಡೆದಿದೆ. ನಾಗವೇಣಿ ಯಮನಪ್ಪ ಕೊಡೇರ(28) ಮೃತ ಮಹಿಳೆ. ನಾಗವೇಣಿ ಹೆರಿಗೆಗೆಂದು ತವರು ಮನೆಗೆ ಬಂದಿದ್ದಳು. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಬುಧವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಹೆರಿಗೆ ಸಂದರ್ಭದಲ್ಲಿ ಅತೀವ ರಕ್ತ ಸ್ರಾವವಾಗಿ, ಗಂಡು ಮಗುವಿಗೆ ಜನ್ಮ ನೀಡಿದ್ದ ನಾಗವೇಣಿ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆ ಸಿಬ್ಬಂದಿ ದೃಢಪಡಿಸಿದ್ದರು. ಹೀಗಾಗಿ ನಾಗವೇಣಿಯನ್ನು ಮನೆಗೆ ಕೊಂಡೊಯ್ದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಂತಿಮ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಕಣ್ತೆರೆದಿದ್ದನ್ನು ಕಂಡು ಜನರು ಹಾಗೂ ಸಂಬಂಧಿಕರು ಗಾಬರಿಗೊಂಡಿದಲ್ಲದೇ, ತಡ ಮಾಡದೇ ಆಸ್ಪತ್ರೆಗೆ ಕರೆದೊಯ್ಯುವಾಗ ನಾಗವೇಣಿ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಅಂತಿಮವಾಗಿ ದೇವರಗುಡ್ಡದಲ್ಲಿ ನಾಗವೇಣಿಯ ಶವಸಂಸ್ಕಾರ ನೆರವೇರಿತು.