ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ
Team Udayavani, Mar 26, 2024, 6:03 PM IST
ಉದಯವಾಣಿ ಸಮಾಚಾರ
ರಾಣಿಬೆನ್ನೂರ: ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ರಾಜಕೀಯ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವ ಮೂಲಕ ತಾನು ಅಬಲೆಯಲ್ಲ ಸಬಲೆ ಎಂದು ನಿರೂಪಿಸಿದ್ದಾಳೆ ಎಂದು ಕಾಕಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷೆ ರೂಪಾ ಶ್ರೀನಿವಾಸ ಕಾಕಿ ಹೇಳಿದರು.
ನಗರದ ನೀಲಕಂಠೇಶ್ವರ ದೇವಸ್ಥಾನ ಆವರಣದ ಕಾಕಿ ಜನಸೇವಾ ಸಂಸ್ಥೆಯ ಗಣೇಶೋತ್ಸವ ಮಂಟಪದಲ್ಲಿ ದೇವಾಂಗ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಶೋಷಣೆಯ ನಡುವೆಯೂ ಪುರುಷ ಪ್ರಧಾನ ಕಾಲದಿಂದಲೂ ನಿರಂತರ ಹೋರಾಟ ಮನೋಭಾವ ಹೊಂದುವ ಮೂಲಕ ಕುಟುಂಬದ ಗೃಹಣಿಯಾಗಿ, ತಾಯಿಯಾಗಿ, ಮಡದಿಯಾಗಿ ಕೌಟುಂಬಿಕ ಜವಾಬ್ದಾರಿ ನಿಭಾಯಿಸುವುದರ ಜೊತೆಗೆ ದೇಶ
ಮುನ್ನಡೆಸುವ ಮೂಲಕ ನಾರಿಶಕ್ತಿಯನ್ನು ಇಡೀ ಪ್ರಪಂಚಕ್ಕೆ ತೋರ್ಪಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಡಾ| ವಿದ್ಯಾ ಕೇಲಗಾರ ಮಾತನಾಡಿದರು. ಕೌಟುಂಬಿಕ ನಿರ್ವಹಣೆಯೊಂದಿಗೆ ಟೇಲರಿಂಗ್, ಪೇಂಟಿಂಗ್, ಕಸೂತಿ, ಹಾಲು ಉತ್ಪಾದನೆ ಜೊತೆಗೆ ಯೋಗ, ಪ್ರಾಣಾಯಾಮ, ದ್ಯಾನವನ್ನು ನಿತ್ಯ ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜ ಸೇವೆಯತ್ತ ಸಾಗಿ. ಮಕ್ಕಳನ್ನು ಆದಷ್ಟು ಮೊಬೈಲ್ ಗೀಳಿನಿಂದ ಹೊರತಂದು ಅವರಲ್ಲಿ ಸರಳತೆ, ನಮೃತೆ, ವಿಶ್ವಾಸ, ಛಲ, ನಿಷ್ಠೆ ಪ್ರಾಮಾಣಿಕತೆ ಮುಖ್ಯವಾಗಿ ಸಂಸ್ಕಾರವಂತರನ್ನಾಗಿಸುವುದು ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಶಿಕ್ಷಕಿ ಉಮಾ ಅಂಗಡಿ ಹಾಗೂ ಲಕ್ಷ್ಮೀ ಕದರಮಂಡಲಗಿ ಸ್ತ್ರೀ ಸಬಲೀಕರಣದ ಬಗ್ಗೆ ಮಾತನಾಡಿದರು. ಅನುರಾಧಾ ಗುಳೇದಗುಡ್ಡ ಪ್ರಾಸ್ತಾವಿಕ ಮಾತನಾಡಿದರು. ದೇವಾಂಗ ಸಮಾಜದ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಹಳ್ಳಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ ಕುಂಚೂರ, ಸೌಮ್ಯ ಹರಿಹರ, ಪುಷ್ಪಾ ಮಾಳಗಿ, ಶಾರದಾ ಆನ್ವೇರಿ, ಭಾಗ್ಯಶ್ರೀ ಕುಸಗೂರ, ಸೌಂದರ್ಯ ಮತ್ತೂರ ಉಪಸ್ಥಿತರಿದ್ದರು.