ಜ್ಞಾನಾರ್ಜನೆ ವಿದ್ಯಾರ್ಥಿ ಜೀವನದ ಪ್ರಮುಖ ಗುರಿ: ಪೀರಜಾದೆ
Team Udayavani, Feb 1, 2019, 11:06 AM IST
ರಾಣಿಬೆನ್ನೂರ: ವಿದ್ಯಾರ್ಥಿ ಜೀವನದ ಪ್ರಮುಖ ಗುರಿ ಜ್ಞಾನಾರ್ಜನೆ ಎಂಬುವದನ್ನು ಮರೆಯದೆ ತಂದೆ-ತಾಯಿ, ಪೋಷಕರನ್ನು ಹಾಗೂ ಗುರು-ಹಿರಿಯರನ್ನು ಗೌರವಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಸಿ. ಪೀರಜಾದೆ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕ, ವಿದ್ಯಾರ್ಥಿ ಸಂಘ, ಭಾರತ್ ಸೇವಾದಳ, ಹಸಿರು ಪಡೆ ಆಶ್ರಯದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿನಯಶೀಲತೆ, ಪ್ರಾಮಾಣಿಕತೆ, ಆತ್ಮವಿಶ್ವಾಸ, ನಂಬಿಕೆ ಇಂತಹ ಸದ್ಗುಣಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಭವಿಷ್ಯದಲ್ಲಿ ಉತ್ತಮ ಉದ್ಯೋಗ ಮತ್ತು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪಗೊಳ್ಳಲು ಅವಿರತ ಶ್ರಮ ಹಾಗೂ ಆತ್ಮವಿಶ್ವಾಸ ಅತ್ಯಗತ್ಯ ಎಂದರು.
ಇಂದು ಪಿಯುಸಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳಿಗೆ ಮುಂದೆ ಏನು ಮಾಡಬೇಕೆಂಬ ಗುರಿ ಹೊಂದಿದಲ್ಲಿ ಪ್ರಪಂಚದಲ್ಲಿ ನಮ್ಮ ದೇಶ ಮಾದರಿಯಾಗಲಿದೆ ಎಂದರು.
ಹಿರಿಯ ಉಪನ್ಯಾಸಕ ಎ.ವಿ. ಲಕ್ಕನಗೌಡ್ರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಇಲ್ಲದಿರುವುದು ಹೆಚ್ಚಾಗಿ ಕಾಣುತ್ತಿದೆ. ಇಂದು ಮೊಬೈಲ್ ಹಾವಳಿ ಹೆಚ್ಚಾಗಿದ್ದು, ಮೊಬೈಲ್ ಸಂಸ್ಕೃತಿಗೆ ಅಂತ್ಯ ಹಾಡಿ ಪಠ್ಯ ಅಧ್ಯಯನ ಮಾಡಿ ಉತ್ತಮ ಅಂಕಗಳಿಸಬೇಕು. ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಮಹೇಶ್ ದೇವಗಿರಿಮs್ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ರೋಹಿಣಿ ಕುಸಗೂರು ಅವರಿಗೆ ನಗದು ಹಣ ನೀಡಿ ಗೌರವಿಸಲಾಯಿತು. ಪ್ರಾಚಾರ್ಯ ಪಿ.ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿ.ವಿ. ಕುಡುಪಲಿ, ಆರ್.ಬಿ. ತೋಟಿಗೇರ್, ಬಿ.ಎಸ್. ಜಾಪಾಳಿ, ವೀರನಗೌಡ ಪೊಲೀಸ್ಗೌಡ್ರ, ಪಕ್ಷಪ್ಪ ಸಾವಜಿ, ಪಿ.ಎಸ್.ತೆಂಬದ, ವೀರಯ್ಯ ದೇವಗಿರಿಮಠ, ಯೋಜನಾಧಿಕಾರಿ ಎಚ್. ಶಿವಾನಂದ, ಎಂ. ಶಿವಕುಮಾರ, ಎಂ.ಜಿ. ಹೊನ್ನಮ್ಮನವರ, ಎಸ್.ಶಕ್ತಿ, ಸಿ. ಜೈಪ್ರಕಾಶ, ಕೆ.ಜಿ.ಆಶಾ, ಎಸ್.ಎಸ್.ಬಡ್ನಿ, ಉಮೇಹಬೀಬಾ, ವಿಜಯಕುಮಾರ, ಸುಮಾ ಇದ್ದರು.