ಸಾಹಿತ್ಯಕ್ಕೆ ಪದವಿಗಳ ಪರಿಧಿ ಇಲ್ಲ: ಸತೀಶ
Team Udayavani, Dec 6, 2017, 3:13 PM IST
ಹಾನಗಲ್ಲ: ಕವಿತೆ ನನ್ನ ಮೊದಲ ಮತ್ತು ಕೊನೆಯ ಪ್ರೀತಿ. ಬಾಂಧವ್ಯಗಳನ್ನು ಬಿಗಿಯಾಗಿ ಹಿಡಿದುಕೊಂಡು ಬದುಕನ್ನು ಪ್ರೀತಿಸುವ ಇಚ್ಛೆ ನನ್ನದು. ಸಾಹಿತ್ಯ ಪ್ರೀತಿಸುವಂತಹದ್ದೇ ಹೊರತು ದ್ವೇಷಿಸುವುದಲ್ಲ ಎಂದು ಹಾವೇರಿ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಸತೀಶ ಕುಲಕರ್ಣಿ ನುಡಿದರು.
ಮಂಗಳವಾರ ಇಲ್ಲಿನ ಸರಕಾರಿ ಪಪೂ ಮಹಾವಿದ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾಳಿನ ಪೀಳಿಗೆಗೆ ಸಾಹಿತ್ಯ, ಸಂಸ್ಕೃತಿಯ ಅಗತ್ಯಗಳ ಅರಿವು ಮೂಡಿಸಬೇಕು. ಯುವ ಪೀಳಿಗೆ ಸಮಕಾಲಿನ ಚಿಂತನೆಗಳನ್ನು ಬದುಕಿನಲ್ಲಿ ಸವಾಲಾಗಿ ಸ್ವೀಕರಿಸಬೇಕು. ಕವಿತೆ ಬರೆಯುವುದರ ಜೊತೆಗೆ ಅನುಭವಗಳ ಸೂಕ್ಷತೆಗಳನ್ನು ಸಮಾಜಕ್ಕೆ ಮುಟ್ಟಿಸುವ ಸೃಜನಶೀಲತೆ ನಿಜವಾದ ಕವಿ ಎಂದ ಅವರು, ಭಾವನೆಗಳನ್ನು ಶುದ್ಧವಾಗಿ ಅಭಿವ್ಯಕ್ತಿಸುವ ಎಲ್ಲರೂ ಕವಿಗಳೆ ಎಂದರು.
ಪ್ರಾ| ಎಸ್.ಸಿ. ಪೀರಜಾದೆ ಮಾತನಾಡಿ, ಸಾಹಿತ್ಯಕ್ಕೆ ಜಾತಿ, ಧರ್ಮ, ಉದ್ಯೋಗ, ಪದವಿಗಳ ಪರಿಧಿ ಇಲ್ಲ. ಸಂತೋಷಕ್ಕಾಗಿ ಬರೆಯುವುದು ಒಂದಾದರೆ ಇನ್ನೊಬ್ಬರ ಸುಖ, ದುಃಖಗಳನ್ನು ಕಾವ್ಯವಾಗಿಸುವ ಸಹೃದಯತೆಯೂ ಬೇಕು. ಸತೀಶ ಕುಲಕರ್ಣಿ ಚಿನ್ನದಂತ ಸಾಹಿತಿ. ಹಲವು ರೀತಿಯಲ್ಲಿ ಸಾಹಿತ್ಯದ ಒರೆಗಲ್ಲಿನಲ್ಲಿ ಪರೀಕ್ಷೆಗೊಂಡು ಎಲ್ಲರಿಗೂ ಬೇಕಾಗುವ ಸಾಹಿತ್ಯದ ಆಭರಣವಾಗಿದ್ದಾರೆ. ಅವರಿಗೆ ದೊರೆತ ಸಮ್ಮೇಳನದ ಸರ್ವಾಧ್ಯಕ್ಷತೆ ಎಲ್ಲರೂ ಸಂತಸಪಟ್ಟ ಸಂಗತಿ ಎಂದರು. ಕಸಾಪ ತಾಲೂಕು ಮಾಜಿ ಅಧ್ಯಕ್ಷ ಪ್ರಭು ಗುರಪ್ಪನವರ ಮಾತನಾಡಿ, ಸಾಹಿತ್ಯ, ರಂಗ ಕಲೆಗಳು ಸೃಜನಶೀಲ ಮನಸ್ಸಿನ ಅನುಭವದ ಅಭಿವ್ಯಕ್ತಿಗಳು.
ಬರವಣಿಗೆ ಹಾಗೂ ನಾಟ್ಯ ಮನುಷ್ಯನನ್ನು ಶುದ್ಧಗೊಳಿಸುತ್ತವೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮುತ್ತಣ್ಣ
ನಾಶಿಕ ಕವಿಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿದರು. ಸಾಹಿತಿ ಪ್ರೊ| ಮಾರುತಿ ಶಿಡ್ಲಾಪುರ ಮಾತನಾಡಿದರು. ಉಪನ್ಯಾಸಕ ನಾಗರಾಜ ಧಾರೇಶ್ವರ, ಕಲಾವಿದ ರವಿ ಲಕ್ಷ್ಮೇಶ್ವರ, ಮಾರುತಿ ಪೇಟಕರ, ಕೆ.ಎಲ್. ದೇಶಪಾಂಡೆ, ಮಂಜುನಾಥ ಕರ್ಜಗಿ, ಅಶೋಕ ಕೊಂಡ್ಲಿ, ಎನ್.ವಿ. ಪಾಟೀಲ, ಗೌರಿ ಕೊಂಡೋಜಿ, ಸಂಜನಾ ಕಲಾಲ, ಚೇತನ ನಾಗಜ್ಜನವರ, ಉಮಾಮಹೇಶ್ವರಿ ಬಳ್ಳಾರಿ, ಎನ್. ಎನ್. ಸಂಗೂರ ಇದ್ದರು.
ಕವಿಗೋಷ್ಠಿ: ವೀರೇಶ ಹಿರೇಮಠ, ಶಿವರಾಜಕುಮಾರ ರಾಣೆಬೆನ್ನೂರ, ಪವಿತ್ರಾ ಕರಿಯಪ್ಪನವರ, ಮಲ್ಲಮ್ಮ ಶಿಡ್ಲಾಪುರ, ಶ್ವೇತಾ ಬಡಿಗೇರ, ಎಲ್.ಕೆ. ಸುಚಿತಾ, ಅನ್ನಪೂರ್ಣ ಅಂಬಿಗೇರ, ಅಂಜು ಜಂಬೇರ, ನಾಗವೇಣಿ ಕೊರವರ ಸ್ವರಚಿತ ಕವನ ವಾಚನ ಮಾಡಿದರು. ಭಾಗ್ಯಲಕ್ಷ್ಮೀ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ವೀಣಾ ದೇವರಗುಡಿ ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ ಎಚ್.ಎಸ್. ಬಾರ್ಕಿ ನಿರೂಪಿಸಿದರು. ಉಪನ್ಯಾಸಕಿ ರೂಪಾ ಹಿರೇಮಠ ವಂದಿಸಿದರು.