ಮುಖ್ಯಮಂತ್ರಿಗಳಿಗೆ ಅವಮಾನ ಆದರೆ ರಾಜ್ಯಕ್ಕೆ ಅವಮಾನ ಆದಂತೆ: ಯು.ಟಿ. ಖಾದರ್
Team Udayavani, Sep 20, 2019, 1:47 PM IST
ಹಾವೇರಿ: ದೆಹಲಿಯಲ್ಲಿ ಪ್ರಧಾನಿ ಮೋದಿಯವರಿಂದ ಮುಖ್ಯಮಂತ್ರಿಗಳಿಗೆ ಆಗುತ್ತಿರುವ ಅವಮಾನ ರಾಜ್ಯದ ಜನತೆ ಆಗುತ್ತಿರುವ ಅವಮಾನ ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಮೇಲೆ ನಮಗೆ ಗೌರವವಿದೆ. ಅವರನ್ನು ಪ್ರಧಾನಿಯವರು ನಡೆಸಿಕೊಳ್ಳುವ ರೀತಿ ಸರಿಯಿಲ್ಲ. ನಮ್ಮ ರಾಜ್ಯದ ಜನತೆಯನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯವರಿಗೆ ಪ್ರಧಾನಿಯವರನ್ನು ಭೇಟಿಯಾಗಲು ಸಮಯಾವಕಾಶ ಸಿಗದೆ ಇರುವುದು ರಾಜ್ಯದ ಜನತೆಗೆ ಮಾಡುವ ಅವಮಾನ ಎಂದರು.
ಕೇಂದ್ರ ಸರ್ಕಾರ ದೇಶದ ಜನರನ್ನು ವೈರಿಗಳ ರೀತಿಯಲ್ಲಿ ನೋಡುತ್ತಿದೆ. ತುಘಲಕ್ ದರ್ಬಾರ ರೀತಿ ಆಡಳಿತ ನಡೆಸುತ್ತಿದೆ. ಎಲ್ಲದಕ್ಕೂ ದಂಡ, ಎಲ್ಲದಕ್ಕೂ ಶಿಕ್ಷೆ, ಎಲ್ಲದಕ್ಕೂ ತೆರಿಗೆ ವಿಧಿಸುತ್ತಿದೆ. ಪ್ರವಾಹ ಸಂತ್ರಸ್ಥರ ನೆರವಿಗೆ ಧಾವಿಸದೇ ಸರ್ಕಾರ, ಸಂತ್ರಸ್ಥರನ್ನು ಕಡೆಗಣಿಸಿದೆ. ಸಂತ್ರಸ್ಥರ ನೆರವಿಗೆ ಕೇಂದ್ರದಿಂದ ಒಂದು ನಯಾಪೈಸೆಯೂ ಬಂದಿಲ್ಲ. ಪ್ರಧಾನಿಯವರು ನೆರೆ ಸಂತ್ರಸ್ಥರ ಕಣ್ಣೀರು ಒರೆಸುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ ಎಂದರು.
ಪಾಕಿಸ್ಥಾನವನ್ನೂ ಭಾರತಕ್ಕೆ ಸೇರಿಸುತ್ತೇವೆ ಎನ್ನುವ ಈಶ್ವರಪ್ಪ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅದನ್ನು ಮೊದಲು ಮಾಡಿ ತೋರಿಸಲಿ. ಅದನ್ನು ಬಿಟ್ಟು ಚುನಾವಣೆ ಅಸ್ತ್ರವಾಗಿ ಉಪಯೋಗಿಸಿಕೊಳ್ಳುವುದು, ಸೇರಿಸುತ್ತೇನೆ ಎನ್ನುತ್ತಲೇ ಅಲ್ಲಿ ಹೋಗಿ ಬಿರಿಯಾನಿ ತಿಂದು ಬರುವುದು ಬೇಡ. ದಾವೂದ್ ಇಬ್ರಾಹಿಂನನ್ನು ಹಿಡಿದು ತರುತ್ತೇವೆ ಎಂದು, ಆರು ವರ್ಷಗಳಿಂದ ಹೇಳುತ್ತಿದ್ದಾರೆ. ಇನ್ನೂ ಹಿಡಿದು ತಂದಿಲ್ಲ. ಚುನಾವಣೆ ಮುನ್ನ ಸ್ವಿಸ್ನಿಂದ ಹಣ ತರುತ್ತೇನೆ ಎಂದು ಹೇಳಿ, ಬಳಿಕ ನೋಟ್ ಬ್ಯಾನ್ ಮಾಡಿ ದೇಶದ ಜನರಿಂದಲೇ ಹಣ ಸಂಗ್ರಹಿಸಿದ್ದನ್ನು ಜನರು ಕಂಡಿದ್ದಾರೆ ಎಂದರು.