ಬಸ್ ನಿಲ್ದಾಣದ ಮಳಿಗೆ ವ್ಯಾಪಾರಸ್ಥರ ಪ್ರತಿಭಟನೆ
Team Udayavani, Jul 14, 2020, 1:20 PM IST
ಹಾವೇರಿ: ಕೇಂದ್ರ ಬಸ್ನಿಲ್ದಾಣದಲ್ಲಿರುವ ಮಳಿಗೆಗಳ ಬಾಡಿಗೆಯನ್ನು ಡಿಸೆಂಬರ್ ವರೆಗೆ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಮಳಿಗೆ-ಹೊಟೆಲ್ ವ್ಯಾಪಾರಸ್ಥರು ಸೋಮವಾರ ಅಂಗಡಿ ಬಂದ್ ಮಾಡಿ ಪ್ರತಿಭಟಿಸಿದರು.
ಅಂಗಡಿಗಳನ್ನು ಬಂದ್ ಮಾಡಿ ಕೆಲಹೊತ್ತು ಪ್ರತಿಭಟನೆ ನಡೆಸಿದ ವ್ಯಾಪಾರಸ್ಥರು ಬಳಿಕ ವಾಕರಸಾಸಂವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಮನವಿಯನ್ನು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಲ್ಲಿಸಿದರು.
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ವಿಧಿಸಿದ ಲಾಕ್ಡೌನ್ನಿಂದಾಗಿ ಮಾರ್ಚ್ 23ರಿಂದ ಬಸ್ ಸಂಚಾರ ಬಂದ್ ಮಾಡಲಾಗಿದ್ದು ಮಾರ್ಚ್ 23ರಿಂದ ಮೇ 31ರ ವರೆಗೆ ಮಾಸಿಗೆ ಬಾಡಿಗೆ ಮನ್ನಾ ಮಾಡಲಾಗಿತ್ತು. ವಾರದ ಕರ್ಫ್ಯೂಸೇರಿದಂತೆ ಇನ್ನಿತರ ಕಾರಣಕ್ಕಾಗಿ ಬಸ್ ಸಂಚಾರ ಸುಗಮಗೊಳ್ಳದೇ ಇದ್ದರೂ ಜೂ. 1ರಿಂದಲೇ ಬಾಡಿಗೆ ತುಂಬಲು ಸೂಚಿಸಲಾಗಿದೆ. ಕೊರೊನಾದಿಂದಾಗಿ ವ್ಯಾಪಾರ ಕುಸಿದಿದ್ದು ಬಾಡಿಗೆ, ಸಿಬ್ಬಂದಿ ವೇತನ, ವಿದ್ಯುತ್ ಬಿಲ್ ಕೊಡಲು ಸಹ ಆಗುತ್ತಿಲ್ಲ. ಈ ನಡುವೆಯೇ ಶೇ. 35ರಿಂದ 40ರಷ್ಟು ಬಾಡಿಗೆ ತುಂಬಲು ಸೂಚಿಸಿದ್ದು ವ್ಯಾಪಾರಸ್ಥರಿಗೆ ಹೊರೆಯಾಗಿದೆ. ಆದ್ದರಿಂದ ಡಿಸೆಂಬರ್ ವರೆಗಿನ ಬಾಡಿಗೆ ಮನ್ನಾ ಮಾಡಬೇಕು. ಈ ಬಗ್ಗೆ ಸಂಸ್ಥೆ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ಅನಿರ್ದಿಷ್ಟಾವ ಧಿ ಮಳಿಗೆ, ಹೊಟೆಲ್ ಬಂದ್ ಮಾಡಲಾಗುವುದು ಎಂದು ವ್ಯಾಪಾರಸ್ಥರು ಮನವಿ ಮೂಲಕ ಎಚ್ಚರಿಕೆ ನೀಡಿದರು.