‘ಮತದಾನ ರಥ’ಕ್ಕೆ ಜಿಪಂ ಸಿಇಒ ಚಾಲನೆ
ಜಿಲ್ಲಾ ಸ್ವೀಪ್ ಸಮಿತಿಯಿಂದ ವೈವಿಧ್ಯಮಯ ಕಾರ್ಯಕ್ರಮ ಜಿಲ್ಲಾದ್ಯಂತ ಸಂಚರಿಸಿ ಮತದಾನ ಜಾಗೃತಿ
Team Udayavani, Apr 4, 2019, 1:26 PM IST
ಬಳ್ಳಾರಿ: ಮತದಾನ ಜಾಗೃತಿ ಮೂಡಿಸುವ ಮತದಾನ ರಥಕ್ಕೆ ಜಿಪಂ ಸಿಇಒ ಕೆ.ನಿತೀಶ್ ಚಾಲನೆ ನೀಡಿದರು.
ಬಳ್ಳಾರಿ: ಗಣಿಜಿಲ್ಲೆಯ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಶೇಕಡಾವಾರು ಪ್ರಮಾಣ ಹೆಚ್ಚಿಸುವ ಹಾಗೂ ನೈತಿಕ ಮತದಾನಕ್ಕೆ ಒತ್ತು ನೀಡುವ ಹಾಗೂ ಕಡ್ಡಾಯ ಮತದಾನದ ಸಂದೇಶ ಸಾರುವ ‘ಮತದಾನ ರಥ’ಕ್ಕೆ ಜಿಪಂ ಸಿಇಒ ಕೆ.ನಿತೀಶ್ ಚಾಲನೆ ನೀಡಿದರು.
ನಗರದ ಜಿಪಂ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಕೆ.ನಿತೀಶ್ ಹಸಿರು ನಿಶಾನೆ ತೋರುವ ಮೂಲಕ ಮತದಾನ ರಥಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಅಮೂಲ್ಯ ಮತದಾನದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಇಡೀ ಜಿಲ್ಲೆಯಾದ್ಯಂತ ಸಂಚರಿಸಿ ತಪ್ಪದೇ ಮತದಾನ ಮಾಡಿ, ಆಮಿಷಗಳಿಗೆ ಮರುಳಾಗದಿರಿ, ಯೋಗ್ಯ ವ್ಯಕ್ತಿಗೆ ಮತ ಚಲಾಯಿಸಿ ಎಂಬುದು ಸೇರಿದಂತೆ ವಿವಿಧ ಸಂದೇಶಗಳನ್ನೊಳಗೊಂಡಿರುವ ಮತದಾನ ರಥವು ಕೂಡ ಒಂದಾಗಿದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಒಂದು ಮತದಾನ ರಥ ನೀಡಿದ್ದು, ಆ ರಥಗಳು ಕ್ಷೇತ್ರದಾದ್ಯಂತ ಸಂಚರಿಸಿ ಅರಿವು ಮೂಡಿಸಲಿವೆ ಎಂದರು. ಈ ವೇಳೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಕೆ.ಆರ್.ನಂದಿನಿ, ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ್ ಗುಡಿ, ಚನ್ನಪ್ಪ, ಬಿಸಿಎಂ ಅಧಿಕಾರಿ ಸುರೇಶ್ ಬಾಬು ಇನ್ನಿತರರಿದ್ದರು.