ಬಿಜೆಪಿ ಭದ್ರಕೋಟೆ ಛಿದ್ರ
Team Udayavani, Jun 14, 2018, 7:10 AM IST
ಕಲಬುರಗಿ: ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ, ಕಳೆದ ಮೂರು ದಶಕದಿಂದಲೂ ಬಿಜೆಪಿಯ ಭದ್ರಕೋಟೆಯಾಗಿದ್ದ
ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಜಯ ಸಾಧಿಸಿದೆ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ ಹುಮನಾಬಾದ ಅವರು ಬಿಜೆಪಿ ಅಭ್ಯರ್ಥಿ ಹೊಸಪೇಟೆಯ ಕೆ.ಬಿ ಶ್ರೀನಿವಾಸ ಅವರನ್ನು 321 ಮತಗಳ ಅಂತರದಿಂದ ಸೋಲಿಸುವ ಮೂಲಕ ಜಯದ ನಗೆ ಬೀರಿದರು.
ಹೈದ್ರಾಬಾದ ಕರ್ನಾಟಕದ ಬೀದರ, ಕಲಬುರಗಿ,ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಪದವೀಧರ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು 1988ರಲ್ಲಿ. ಮೊದಲ ಮೂರು ಅವಧಿಗೆ
ದಿ.ಡಾ.ಎಂ.ಆರ್.ತಂಗಾ, ಸತತ ಮೂರು ಸಲ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಹೈದ್ರಾಬಾದ ಕರ್ನಾಟಕದಿಂದ ವಿಧಾನ ಪರಿಷತ್ನಲ್ಲಿ ಬಿಜೆಪಿ ಮೊದಲ ಸದಸ್ಯರಾಗಿ ಡಾ.ಆಯ್ಕೆಯಾಗಿರುವುದು ವಿಶೇಷ.
ತದನಂತರ ಮನೋಹರ ಮಸ್ಕಿ ಆಯ್ಕೆಯಾಗಿದ್ದರೆ, ಕಳೆದ ಸಲ ಅಮರನಾಥ ಪಾಟೀಲ ಚುನಾಯಿತರಾಗಿದ್ದರು. ಆದರೆ, ಈ ಸಲ ಹಾಲಿ ಸದಸ್ಯ ಅಮರನಾಥ ಪಾಟೀಲ ಅವರಿಗೆ ಟಿಕೆಟ್ ನೀಡದಿರುವುದು ಬಿಜೆಪಿಗೆ ಹಿನ್ನಡೆಯಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.