ಗುಲ್ಬರ್ಗ ವಿವಿ: ಮುಂದುವರಿದ ಅವಾಂತರ
Team Udayavani, May 24, 2018, 5:30 PM IST
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ವಿವಿಧ ಪದವಿಗಳ ಎರಡನೇ, ನಾಲ್ಕನೇ ಹಾಗೂ ಆರನೇ ಸೆಮಿಸ್ಟಾರ್ ಪರೀಕ್ಷೆ ಕಳೆದ ಮೇ 18ರಿಂದ ಆರಂಭವಾಗಿದ್ದು, ವಾರದೊಳಗೆ ಎರಡು ದಿನ ದಿಢೀರನೇ ಪರೀಕ್ಷೆ ಮುಂದೂಡುವ ಮುಖಾಂತರ
ಒಂದು ವರ್ಷವೂ ಸುಗಮವಾಗಿ ಪರೀಕ್ಷೆ ನಡೆಸಲಿಕ್ಕೆ ಬಾರದು ಎನ್ನುವುದನ್ನು ಮತ್ತೂಮ್ಮೆ ನಿರೂಪಿಸಿದೆ.
ಮೇ 21ರಂದು ನಡೆಯಬೇಕಿದ್ದ ಬಿಎಸ್ಸಿ ಎರಡನೇ ಸೆಮಿಸ್ಟಾರ್ ಪರೀಕ್ಷೆಯನ್ನು ರವಿವಾರ ಮಧ್ಯರಾತ್ರಿ ಮುಂದೂಡಲಾಗಿತ್ತು. ಮೇ 23ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಮುಂದೂಡುವ ನಿರ್ಧಾರ ಪ್ರಕಟಿಸಲಾಯಿತು.
ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಧಿಡೀರ ಮುಂದೂಡಿಕೆ ನಿರ್ಧಾರ ಕೇಳಿ ಬೇಸರ ವ್ಯಕ್ತಪಡಿಸಿದರಲ್ಲದೇ ಗುಲ್ಬರ್ಗ ವಿವಿಗೆ ಪರೀಕ್ಷೆಯೊಂದನ್ನು ಸಹ ಸರಿಯಾಗಿ ನಡೆಸಲಿಕ್ಕೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕಟಗೊಳ್ಳದ ಪ್ರಶ್ನೆ ಪತ್ರಿಕೆ: ಬುಧವಾರ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಪ್ರಕಟಗೊಳ್ಳದ ಕಾರಣ ಪರೀಕ್ಷೆಯನ್ನು ದಿಢೀರನೇ ಮುಂದೂಡಲಾಗಿದೆ. ಸಕಾಲಕ್ಕೆ ಮುದ್ರಣಾಲಯದಿಂದ ಪ್ರಶ್ನೆ ಪತ್ರಿಕೆ ಮುದ್ರಣಗೊಂಡು ವಿವಿಗೆ ಬಾರದಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ. ಎಲ್ಲ ವಿಷಯಗಳ ಪರೀಕ್ಷೆ ಮುಗಿದ ನಂತರ ಕೊನೆಗೆ ಬುಧವಾರದ ಪರೀಕ್ಷೆ ತೆಗೆದುಕೊಳ್ಳಲಾಗುವುದು ಎಂದು ವಿವಿ ಪರೀಕ್ಷಾ ವಿಭಾಗದ ಕುಲಸಚಿವ ಡಾ| ಡಿ.ಎಂ. ಮದರಿ ಉದಯವಾಣಿಗೆ ತಿಳಿಸಿದ್ದಾರೆ.
ಸುಸೂತ್ರ ಪರೀಕ್ಷೆ ಮರೆತಿರುವ ವಿವಿ: ಕಳೆದ ದಶಕದ ಅವಧಿಯಿಂದಲೂ ಪರೀಕ್ಷೆ ಸಮಯದಲ್ಲಿ ನಡೆಯುತ್ತಿರುವ ಅವಾಂತರಗಳನ್ನು ನೋಡಿದರೆ ಗುಲ್ಬರ್ಗ ವಿವಿ ಸುಗಮ ಅಥವಾ ಸುಸೂತ್ರದ ಪರೀಕ್ಷೆಯನ್ನು ಮರೆತಿದೆ ಎಂಬುದನ್ನು ನಿರೂಪಿಸುತ್ತಿದೆ.
ಕಳೆದ ಐದಾರು ವರ್ಷಗಳಿಂದ ಪರೀಕ್ಷೆ ಸಮಯದಲ್ಲಿ ಒಂದಿಲ್ಲ ಒಂದು ವಿಷಯದ ಪ್ರಶ್ನೆ ಪತ್ರಿಕೆ ಬಹಿರಂಗಗೊಳ್ಳುತ್ತಲೇ ಬಂದಿದೆ. ಕಳೆದ ಹಾಗೂ ಅದರ ಹಿಂದಿನ ವರ್ಷವಂತೂ ದಿನಾಲು ಎನ್ನುವಂತೆ ಮೂರು ವಿಷಯಗಳ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡು ಇಡೀ ವಿವಿಗೆ ಕಪ್ಪು ಚುಕ್ಕೆಯಾಗಿರುವುದನ್ನು ಯಾರೂ ಮರೆಯುವಂತಿಲ್ಲ.
ಪ್ರಶ್ನೆ ಪತ್ರಿಕೆ ಬಹಿರಂಗ ತನಿಖೆಗೆ ಒಳಪಡಿಸಲಾಯಿತಲ್ಲದೇ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಹ ನೀಡಲಾಗಿತ್ತು. ಆದರೆ ಫಲಿತಾಂಶ ಮಾತ್ರ ಶೂನ್ಯ ಎನ್ನುವಂತಾಗಿದೆ. ಸಾಮೂಹಿಕ ನಕಲು ಎನ್ನುವುದು ಪರೀಕ್ಷೆಯಲ್ಲಿ ಬಿಡಿಸಲಾಗದ
ನಂಟು ಎನ್ನುವಂತೆ ಬೆನ್ನು ಹತ್ತಿದೆ. ಇದನ್ನು ತಪ್ಪಿಸಲು ಪ್ರಸಕ್ತವಾಗಿ ಕ್ಲಸ್ಟರ್ ಪದ್ಧತಿ ಜಾರಿಗೆ ತರಲಾಗಿದೆ.
ಆದರೆ ವಿವಿ ಚಾಪೆ ಕೆಳಗೆ ತೂರಿದರೆ ಖಾಸಗಿ ಕಾಲೇಜುಗಳು ಹಾಗೂ ವಿದ್ಯಾರ್ಥಿಗಳು ರಂಗೋಲಿ ಕೆಳಗೆ ತೂರಿದಂತೆ ಕ್ಲಸ್ಟರ್ ಪದ್ಧತಿ ಉಲ್ಲಂಘನೆ (ವೈಲೆನ್ಸ್ ) ನಿಯಮದಡಿ ಪ್ರತಿ ವಿದ್ಯಾರ್ಥಿಯಿಂದ 10 ಸಾವಿರ ರೂ. ದಂಡ ಕಟ್ಟಿಸಿ ಖಾಸಗಿ ಕಾಲೇಜಿನವರು ತಮ್ಮ ಕಾಲೇಜಿನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಪಡೆಯುತ್ತಿರುವುದನ್ನು ನೋಡಿದರೆ ಪರೀಕ್ಷೆ
ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಹಿಂದುಳಿದ ಈ ಭಾಗದಲ್ಲಿನ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿ ಎನ್ನುವ ಆಶಯದೊಂದಿಗೆ ಮೂರು ದಶಕಗಳ ಹಿಂದೆ ಇಲ್ಲಿ ಪ್ರಾರಂಭವಾಗಿರುವ ಗುಲ್ಬರ್ಗ ವಿವಿ ಆರಂಭದಿಂದಲೂ ಒಂದಿಲ್ಲ ಒಂದು ವಿವಾದ ಹಗರಣ, ಕುಖ್ಯಾತಿ ಪಡೆಯುತ್ತಾ ಬಂದಿದೆ. ಅಲ್ಲದೇ ಈಗ ಸುಸೂತ್ರ ಪರೀಕ್ಷೆ ನಡೆಸಲಾರದ ಸಮಸ್ಯೆಯಿಂದ ಹೊರ ಬಾರದೇ ನರಳಾಡುತ್ತಿದೆ.
ವಿವಿಯಲ್ಲಿ ಬಹು ಮುಖ್ಯವಾಗಿ ಜಾತಿಯತೆ ತಾಂಡವಾಡುತ್ತಿದೆ. ಎಲ್ಲದಕ್ಕೂ ಜಾತಿಯನ್ನೇ ಮುಂದು ಮಾಡಲಾಗುತ್ತಿದೆ. ಅದರಲ್ಲೂ ಅಧ್ಯಯನ-ಅಧ್ಯಾಪನ ಮರೆತಿರುವ ಗುಲ್ಬರ್ಗ ವಿಶ್ವವಿದ್ಯಾಲಯ ಶೈಕ್ಷಣಿಕ ಚುಟವಟಿಕೆಗಳಲ್ಲಿ ಪ್ರಮುಖವಾಗಿರುವ ಪರೀಕ್ಷೆಯನ್ನೇ ಸರಿಯಾಗಿ ನಡೆಸಲಿಕ್ಕೆ ಬಾರದಂತಾಗಿರುವುದು ನಿಜಕ್ಕೂ ಆತ್ಮಾವಲೋಕನ ಮಾಡಿಕೊಂಡು ಅಮೂಲಾಗ್ರ ಸುಧಾರಣೆಯತ್ತ ಹೆಜ್ಜೆ ಇಡುವುದು ಅಗತ್ಯವಾಗಿದೆ
ಬುಧವಾರ ನಡೆಯಬೇಕಿದ್ದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸಕಾಲಕ್ಕೆ ಪ್ರಕಟಗೊಂಡು ವಿವಿಗೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ದಿಢೀರನೇ ಪರೀಕ್ಷೆ ಮುಂದೂಡಲಾಗಿದೆ. ಎಲ್ಲ ವಿಷಯಗಳ ಪರೀಕ್ಷೆ ಮುಗಿದ ನಂತರ ಕೊನೆಗೆ ಬುಧವಾರದ ಪರೀಕ್ಷೆ ನಡೆಸಲಾಗುವುದು.
ಡಾ| ಡಿ. ಎಂ. ಮದರಿ, ಕುಲಸಚಿವರು (ಮೌಲ್ಯಮಾಪನ), ಗುಲ್ಬರ್ಗ ವಿವಿ
ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ